ಕೂಡಿಗೆ, ಜೂ. ೩: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯು ಈ ಬಾರಿ ಜೂನ್ ಮೊದಲ ವಾರದಲ್ಲೇ ಶೇಕಡಾ ೮೦ರಷ್ಟು ಭರ್ತಿಯಾದ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಭದ್ರತೆಯ ಹಿತದೃಷ್ಟಿಯಿಂದ ಮತ್ತು ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ ಇಡಿಸಿಎಲ್ ವಿದ್ಯುತ್ ಘಟಕದ ಮೂಲಕ ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

ರಾಜ್ಯ ಕಾವೇರಿ ನೀರಾವರಿ ನಿಗಮದ ಆದೇಶದಂತೆ ಹಾರಂಗಿ ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರ ಕೆ.ಕೆ. ರಘುಪತಿ ಅವರ ಸೂಚನೆಯಂತೆ ಈ ಸಾಲಿನಲ್ಲಿ ಅಣೆಕಟ್ಟೆಯ ನಾಲೆಯ ಮುಖ್ಯ ಗೇಟ್‌ನ ಮೂಲಕ ವಿದ್ಯುತ್ ಘಟಕದ ಮುಖೇನ ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗಿದೆ.

ನಾಲೆಯ ಮುಖ್ಯಗೇಟ್‌ಗೆ ಸಂಪ್ರದಾಯದAತೆ ಪೂಜೆ ಸಲ್ಲಿಸಿ ನಂತರ ಸೈರನ್ ಮೂಲಕ ನದಿ ದಂಡೆಯ ಜನರಿಗೆ ಮಾಹಿತಿ ನೀಡಿ ೧ ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗಿದೆ. ಈ ಸಂದರ್ಭ ನೀರಾವರಿ ಇಲಾಖೆಯ ಇಂಜಿನಿಯರ್ ಸೌಮ್ಯ ರಾಜ್, ಡಿ.ಡಿ. ಕಿರಣ್, ಸ್ವಾತಿ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.