ಪೊನ್ನಂಪೇಟೆ, ಮೇ. ೨೫: ಗೋಣಿಕೊಪ್ಪಲಿನ ಯುನೈಟೆಡ್ ಜಮಾಅತ್ (ಯು. ಜೆ. ಜಿ.) ವತಿಯಿಂದ ೬ನೇ ತರಗತಿಯ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗಾಗಿ ಮಾದಕ ವಸ್ತು ವಿರೋಧಿ ಜಾಗೃತಿ ಮತ್ತು ವೃತ್ತಿ ಜೀವನ ಮಾರ್ಗದರ್ಶನ ಶಿಬಿರವನ್ನು ತಾ. ೨೭ರಂದು ಗೋಣಿಕೊಪ್ಪಲಿನಲ್ಲಿ ಆಯೋಜಿಸಲಾಗಿದೆ.

‘ನಮ್ಮ ನಡೆ ಮಾದಕ ವಸ್ತು ಮುಕ್ತ ಸಮಾಜ ಮತ್ತು ಅರಿವಿನ ಕಡೆ' ಎಂಬ ಧ್ಯೇಯವಾಕ್ಯದೊಂದಿಗೆ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮವು ಕೊಡಗು ಇಂಟರ್‌ನ್ಯಾಷನಲ್ ಕಮ್ಯುನಿಟಿ ಸಭಾಂಗಣದಲ್ಲಿ ಜರುಗಲಿದೆ ಎಂದು ಗೋಣಿಕೊಪ್ಪಲು ಯುನೈಟೆಡ್ ಜಮಾಅತ್‌ನ ಅಧ್ಯಕ್ಷ ಎಂ.ಎ. ಸಮೀರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಉಮೀದ್ ರಿಹೆಬ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಮೊಹಮ್ಮದ್ ರಫಿಯುದ್ದೀನ್ ರಶೀದ್ ಹಾಗೂ ಪುಣೆಯ ಅನೀಸ್ ಡಿಫೆನ್ಸ್ ಅಕಾಡೆಮಿಯ ಸ್ಥಾಪಕ ನಿರ್ದೇಶಕ ಅನೀಶ್ ಕುಟ್ಟಿ ಆಗಮಿಸಲಿದ್ದಾರೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳ ನೋಂದಣಿ ಕಾರ್ಯ ಅಂದು ಬೆಳಗ್ಗೆ ೯ ಗಂಟೆಯಿAದಲೇ ಆರಂಭಗೊಳ್ಳಲಿದೆ ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಗೋಣಿಕೊಪ್ಪಲು ಯುನೈಟೆಡ್ ಜಮಾಅತ್ ಕಾರ್ಯದರ್ಶಿ ಅಬ್ದುಲ್ ಸಮದ್ ಟಿ.ಕೆ. ಮಾತನಾಡಿ, ಕೊಡಗು ಜಿಲ್ಲೆ ಪೂರ್ಣವಾಗಿ ಮಾದಕ ವ್ಯಸನದಿಂದ ಮುಕ್ತವಾಗಬೇಕು. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ಇದು ಸಮಾಜದ ಮೇಲೆ ಬಹುದೊಡ್ಡ ಪರಿಣಾಮ ಬೀರಲಿದೆ. ವಿದ್ಯಾರ್ಥಿಗಳನ್ನೇ ಹೆಚ್ಚಾಗಿ ಕೇಂದ್ರೀಕರಿಸಿ ಈ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕಾಗಿದೆ. ಅದಕ್ಕಾಗಿ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಗೌರವಾಧ್ಯಕ್ಷರಾದ ಕೆ.ಎಂ. ಅಬ್ದುಲ್ ರೆಹಮಾನ್ (ಬಾಪು), ಸಂಚಾಲಕರಾದ ತನ್ವೀರ್ ಅಹಮದ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲ್ ನಾಸರ್, ನಜೀರ್ ಮೌಲವಿ ಮೊದಲಾದವರು ಉಪಸ್ಥಿತರಿದ್ದರು.