ಭಾಗಮಂಡಲ, ಮೇ ೨೪ : ಜಿಲ್ಲೆಯ ಬಹುತೇಕ ಕಡೆ ಮಳೆಯಾಗುತ್ತಿದ್ದು, ನದಿ ತೊರೆಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದೆ. ತಲಕಾವೇರಿ ವ್ಯಾಪ್ತಿಯಲ್ಲಿ ಬಿರುಸಿನ ಮಳೆಯಾಗಿದೆ. ತಲಕಾವೇರಿಯಲ್ಲಿ ಇದುವರೆಗೆ ೨೦.೬೭ ಇಂಚು ಮಳೆಯಾಗಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ೧೭.೬೩ ಇಂಚು ಮಳೆಯಾಗಿದೆ. ಮುಂಗಾರು ಮುನ್ನ ಸುರಿದ ಭಾರಿ ಮಳೆಯಿಂದಾಗಿ ತಲಕಾವೇರಿಯಲ್ಲಿ ನಿನ್ನೆಯಿಂದ ೫ ಇಂಚು ಮಳೆಯಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯೊಂದಿಗೆ ಗಾಳಿ ಬೀಸುತ್ತಿದೆ. ಚಳಿಯೂ ಕಾಡುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಗಾಳಿಯಿಂದಾಗಿ ಅಲ್ಲಲ್ಲಿ ಮರದ ರೆಂಬೆಗಳು ಮುರಿದುಬಿದ್ದಿದ್ದು, ಎರಡು ದಿನಗಳಿಂದ ವಿದ್ಯುತ್ ಸಮಸ್ಯೆ ಕಾಣುತ್ತಿದೆ. ವಿದ್ಯುತ್ ಕೊರತೆಯಿಂದಾಗಿ ನೆಟ್ವರ್ಕ್ ಸಮಸ್ಯೆಯು ಕಾಡುತ್ತಿದೆ.
ಇದೇ ರೀತಿ ಮಳೆ ಮುಂದುವರಿದರೆ, ಭಾಗಮಂಡಲ ನಾಪೋಕ್ಲು ಭಾಗದಲ್ಲಿ ಹಾಗೂ ಜಿಲ್ಲೆಯ ಇತರೆÀಡೆ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗುವ ಸಂಭವವಿದೆ. ಕಳೆದ ವರ್ಷ ತಾಪಮಾನ ಏರಿಕೆಯಿಂದಾಗಿ ಕಾಫಿ ಇಳುವರಿಯಲ್ಲಿ ಕುಸಿತ ಕಂಡಿದ್ದು, ಇದೀಗ ಕೊಳೆರೋಗ ಕಾಣಿಸಿ ಕೊಂಡಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಹವಾಮಾನ ಇಲಾಖೆಯ ಮುನ್ಸೂಚನೆ ಯಂತೆ ಜಿಲ್ಲೆಯಲ್ಲಿ ೨ ದಿನಗಳು ರೆಡ್ ಅಲರ್ಟ್ ಘೋಷಿಸಲಾಗಿದೆ.