ಮಡಿಕೇರಿ, ಮೇ ೨೪: ಜಿಲ್ಲೆಯಾದ್ಯಂತ ಮಳೆ ಬಿರುಸು ಪಡೆದುಕೊಂಡಿದೆ.
ಎಲ್ಲೆಡೆ ವರುಣಾರ್ಭಟಕ್ಕೆ ಮರ, ವಿದ್ಯುತ್ ಕಂಬಗಳು ಧರಾಶಾಯಿಗೊಂಡ ಘಟನೆ ವರದಿಯಾಗಿದೆ.
ರಸ್ತೆ ಸಂಚಾರಕ್ಕೆ ತೊಡಕು, ವಿದ್ಯುತ್ ಅಡಚಣೆ ಹಲವೆಡೆ ಸಂಭವಿಸಿದ್ದು, ಹವಾಮಾನ ಇಲಾಖೆ ೨ ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಿದೆ.
ಕರಿಕೆ: ಗ್ರಾಮದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಎಳ್ಳುಕೊಚ್ಚಿ ಪೋಲಿಸ್ ಉಪಠಾಣೆ ಬಳಿ ಗುಡ್ಡ ಕುಸಿತ ಸಂಭವಿಸಿ ಕೆಲ ಗಂಟೆಗಳ ಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ನಂತರ ಯಂತ್ರದ ಸಹಾಯದಿಂದ ಮಣ್ಣು ತೆರವುಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಗ್ರಾಮದಲ್ಲಿ ನಿರಂತರ ಗಾಳಿಸಹಿತ ಮಳೆಯಾಗುತ್ತಿದ್ದು, ಒಂದೇ ದಿನದಲ್ಲಿ ಮೂರುವರೆ ಇಂಚು ಮಳೆ ದಾಖಲಾಗಿದೆ. ಮಳೆಯ ಆರ್ಭಟಕ್ಕೆ ಗ್ರಾಮದ ಹಲವೆಡೆ ವ್ಯಾಪಕವಾಗಿ ಕೃಷಿಹಾನಿಯಾಗಿದೆ.ಸಿದ್ದಾಪುರ: ಗಾಳಿ ಮಳೆಗೆ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದ ಪರಿಣಾಮ ಅಮ್ಮತ್ತಿ ಬಳಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಮ್ಮತ್ತಿ ಸಮೀಪದಲ್ಲಿ ೩೩ ಕೆ.ವಿ. ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆ ಸುತ್ತಮುತ್ತಲಿನ ಗ್ರಾಮದಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಸಮಸ್ಯೆ ಎದುರಾಗಿದೆ.
ವೀರಾಜಪೇಟೆ: ವೀರಾಜಪೇಟೆಯ ಆರ್ಜಿ ಗ್ರಾಮದ ಕಲ್ಲುಬಾಣೆಯಲ್ಲಿ ರಸ್ತೆಯ ಮೇಲೆ ಮರ ಬಿದ್ದು ರಸ್ತೆ ಸಂಚಾರಕ್ಕೆ ತೊಡಕು ಉಂಟಾಗಿದೆ. ವಿದ್ಯುತ್ ಅಡಚಣೆ ಉಂಟಾಗಿದೆ. ಪೆರುಂಬಾಡಿ ಭಾಗದಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ಕೆಲವು ಭಾಗದಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಕೆಳಗೆ ಬಿದ್ದು ವಿದ್ಯುತ್ ಅಡಚಣೆ ಉಂಟಾಗಿದೆ. ಸೆಸ್ಕ್ ಸಿಬ್ಬಂದಿಗಳು ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದು, ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹರಸಾಹಸ ಪಡುತ್ತಿದ್ದಾರೆ.ವೀರಾಜಪೇಟೆ: ವೀರಾಜಪೇಟೆ ತಾಲೂಕಿನಲ್ಲಿ ಎಡೆಬಿಡದೆ ಗಾಳಿಯೊಂದಿಗೆ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಭಾರೀ ಚಳಿ, ಗಾಳಿಯೊಂದಿಗೆ ನಿರಂತರ ಮಳೆಯೂ ಮುಂದುವರೆದಿದೆ. ಕಳೆದ ಎರಡು ದಿನಗಳಿಂದ ಭಾರೀ ಗಾಳಿ ಸಹಿತ ಮಳೆ ಸುರಿಯುತ್ತಿದೆ. ಭಾರೀ ಮಳೆ ಸುರಿಯುವುದರ ಜೊತೆಗೆ ಗಾಳಿ ಬೀಸುತ್ತಿದ್ದು, ತುಂಬಾ ಚಳಿಯ ವಾತಾವರಣ ನಿರ್ಮಾಣವಾಗಿದೆ.
ಭಾರೀ ಮಳೆಯಿಂದಾಗಿ ವೀರಾಜಪೇಟೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಅಡಚಣೆಯಾಗಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಂಬಗಳು ಧರೆಗೆ ಉರುಳಿ ಗ್ರಾಮಗಳಲ್ಲಿ ಕತ್ತಲಾವರಿಸಿದೆ.
ಕೆದಮುಳ್ಳೂರು, ಕದನೂರು, ದೇವಣಗೇರಿ, ಆರ್ಜಿ ಬೇಟೋಳಿ, ಹೆಗ್ಗಳ, ಚೆಂಬೆಬೆಳ್ಳೂರು, ಬಿಟ್ಟಂಗಾಲ, ಕಾಕೋಟುಪರಂಬು, ಕುಟ್ಟಂದಿ, ಶೆಟ್ಟಿಗೇರಿ, ಕಂಡAಗಾಲ, ಅಮ್ಮತ್ತಿ, ಕೊಂಡAಗೇರಿ, ಒಂಟಿಯAಗಡಿ, ಪೆರುಂಬಾಡಿ, ಸೇರಿದಂತೆ ಇತರೆಡೆಗಳಲ್ಲಿ ಗದ್ದೆಗಳು ಜಲಾವೃತಗೊಂಡಿವೆ.
ನಿರAತರ ಸುರಿಯುತ್ತಿರುವ ಮಳೆಯಿಂದ ಹಾಗೂ ವಿದ್ಯುತ್ ಸಮಸ್ಯೆಯಿಂದ ಗ್ರಾಮೀಣ ಭಾಗಗಳಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಂಟಾಗಿದೆ. ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಹಾಗೂ ಪುರಸಭೆ ಅಧಿಕಾರಿಗಳು ಮಳೆಹಾನಿಯಾಗುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈಗಾಗಲೇ ಬೆಟ್ಟ ಪ್ರದೇಶದ ನಿವಾಸಿಗಳಿಗೆ ಮುಂಜಾಗ್ರತಾ ಎಚ್ಚರಿಕೆ ವಹಿಸಿಕೊಳ್ಳಲು ಸೂಚನೆ ನೀಡಲಾಗಿದೆ. ವೀರಾಜಪೇಟೆ ಪಟ್ಟಣದಲ್ಲಿ ಮಳೆಯ ಕಾರಣ ವಾಹನ ಚಲಾಯಿಸಲು ಕಷ್ಟಸಾಧ್ಯವಾಗಿದ್ದು ಟ್ರಾಫಿಕ್ ಜಾಂ ಉಂಟಾಗಿತ್ತು. ಕುಶಾಲನಗರ: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳ ಕಂಡಿದೆ.
ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಮೋಡಕವಿದ ವಾತಾವರಣದೊಂದಿಗೆ ದಿನವಿಡಿ ತುಂತುರು ಮಳೆ ಆಗುತ್ತಿದ್ದು ಜನ ಜೀವನ ಬಹುತೇಕ ಅಸ್ತವ್ಯಸ್ತಗೊಂಡಿತು. ವಿದ್ಯುತ್ ಕಡಿತ
ವೀರಾಜಪೇಟೆ: ಮಳೆಗೆ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಘಟನೆ ಅಮ್ಮತ್ತಿ ಸಮೀಪದಲ್ಲಿ ನಡೆದಿದೆ.
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗಾಳಿ ಮಳೆಗೆ ಸಿಲುಕಿ ಅಮ್ಮತ್ತಿಯ ಸಮೀಪದಲ್ಲಿ ೩೩ ಕೆ.ವಿ. ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮದಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಸಮಸ್ಯೆ ಎದುರಾಗಿದೆ.
ವೀರಾಜಪೇಟೆ: ಕೆದಮುಳ್ಳೂರು ಪಂಚಾಯಿತಿ ವ್ಯಾಪ್ತಿಯ ತೋರ ಗ್ರಾಮದಲ್ಲಿ ಗಾಳಿ ಹಾಗೂ ಮಳೆಗೆ ೯ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಈ ಭಾಗದಲ್ಲಿ ಸಂಪೂರ್ಣವಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜನವಲಯದಲ್ಲಿ ಆತಂಕ ಮನೆ ಮಾಡಿದೆ.
ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ಬಿರುಸಿನ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಅಲ್ಲಲ್ಲಿ ಮರದ ರೆಂಬೆಗಳು ಮುರಿದು ಬಿದ್ದ ಪರಿಣಾಮ ಹೋಬಳಿ ವ್ಯಾಪ್ತಿಯ ಹಲವೆಡೆ ವಿದ್ಯುತ್ ಕಡಿತ ಉಂಟಾಗಿದೆ. ಸಮೀಪದ ಕಕ್ಕಬೆಯ ನಾಲಾಡಿ ಗ್ರಾಮದ ಕೋಡಿಮಣಿಯಂಡ ರಸ್ತೆಯಲ್ಲಿ ಮರ ವಿದ್ಯುತ್ ತಂತಿಗಳ ಮೇಲೆ ಮುರಿದು ಬಿದ್ದ ಪರಿಣಾಮ ಮೂರು ಕಂಬಗಳು ಮುರಿದು ಬಿದ್ದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಹೊದ್ದೂರು ಗ್ರಾಮದ ರಸ್ತೆಯ ಬದಿಯಲ್ಲಿರುವ ವಿದ್ಯುತ್ ಕಂಬಗಳ ಮೇಲೆ ಮಳೆ ಗಾಳಿಗೆ ಮರ ಮುರಿದು ಬಿದ್ದು ಕೆಲವು ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ಸಂಪರ್ಕಕ್ಕೆ ತೊಡಕಾಗಿದೆ.
ಕಕ್ಕಬ್ಬೆ ಪ್ರೌಢ ಶಾಲೆಯ ಮುಖ್ಯದ್ವಾರದ ಬಳಿ ಹೈಟೆನ್ಷನ್ ತಂತಿಗಳ ಮೇಲೆ ಮರ ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡು ಅಪಾಯ ಮಟ್ಟದಲ್ಲಿದ್ದು ಆತಂಕಕ್ಕೆ ಕಾರಣವಾಗಿದೆ.