ವೀರಾಜಪೇಟೆ, ಮೇ ೨೩: ಅಖಿಲ ಭಾರತ ವೀರಶೈವ ಮಹಾಸಭಾ ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕು ಘಟಕದ ವತಿಯಿಂದ ಬಸವ ಜಯಂತಿ ಪ್ರಯುಕ್ತ ವಾರ್ಷಿಕ ಕ್ರೀಡಾಕೂಟ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವು ಮಾಯಮುಡಿ ಧನುಗಾಲ ಮುರುಡೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿತ್ತು. ಕ್ರೀಡಾಕೂಟದ ಉದ್ಘಾಟನೆಯನ್ನು ವೀರಶೈವ ಮಹಾಸಭಾ ಸಲಹಾ ಸಮಿತಿ ಸದಸ್ಯ ಈಶ್‌ಕುಮಾರ್ ಮಂಜು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಮಾಜ ಬಾಂಧವರು ತಮ್ಮ ಆಚಾರ ವಿಚಾರಗಳನ್ನು ಪಾಲಿಸುವ ಮೂಲಕ ಬಸವಣ್ಣನವರ ಆದರ್ಶವನ್ನು ಪಾಲಿಸುವಂತಾಗಬೇಕು. ಹಾಗೂ ಜನಾಂಗ ಬಾಂದವರು ಒಗ್ಗೂಡಲು ಇಂತಹ ಕ್ರೀಡಾಕೂಟ ಸಹಕಾರಿಯಾಗಲಿದೆ. ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ. ಜನಾಂಗದ ಪ್ರತಿಯೊಬ್ಬರು ಕ್ರೀಡೆಯಲ್ಲಿ ಭಾಗವಹಿಸುವಂತಾಗಬೇಕು ಎಂದರು.

ಕ್ರೀಡಾಕೂಟ ಸಮಾರಂಭದ ಅಧ್ಯಕ್ಷತೆಯನ್ನು ವೀರಶೈವ ಮಹಾಸಭಾದ ಪೊನ್ನಂಪೇಟೆ ಮತ್ತು ವೀರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ಎನ್.ಎಂ. ರಾಜೇಶ್ ವಹಿಸಿ ಮಾತನಾಡಿ, ಬಸವಣ್ಣನವರ ತತ್ವ ಮತ್ತು ವಚನಗಳನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಪಾಠದೊಂದಿಗೆ ಕ್ರೀಡೆಯಲ್ಲಿಯೂ ಸದಾ ಭಾಗವಹಿಸಿ ಉತ್ತಮ ಪಟುಗಳಾಗಿ ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿಯೂ ಹೆಸರು ಗಳಿಸುವಂತಾಗಬೇಕು. ಜನಾಂಗ ಬಾಂಧವರ ಸಹಕಾರದಿಂದ ಪ್ರತಿವರ್ಷವು ಕ್ರೀಡಾಕೂಟ ನಡೆಸಲಾಗುತ್ತಿದ್ದು, ಮುಂದಿನ ವರ್ಷ ಇನ್ನೂ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಹೆಚ್.ವಿ. ಶಿವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಘಟಕದ ನಿರ್ದೇಶಕರಾದ ಅನುರಾದ ಚಂದ್ರಶೇಖರ್, ಕೊಡಗು ಜಿಲ್ಲಾ ಉಪಾಧ್ಯಕ್ಷ ಎಸ್.ಎಸ್. ಸುರೇಶ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದೀಪಿಕ ಕರ್ಣ ಅವರುಗಳು ಸಭೆಯನ್ನುದ್ದೇಶಿಸಿ ಮಾತನಾಡಿದರು.

ವಿದ್ಯಾಕ್ಷೇತ್ರದಲ್ಲಿ ಡಾಕ್ಟರೆಟ್ ಪದವಿ ಪಡೆದ ಸಮಾಜದ ಎಸ್.ಎನ್. ಪಂಚಮ ಮತ್ತು ಎಸ್.ಪಿ. ಲಾವಣ್ಯ ಹಾಗೂ ಗಣ್ಯ ವ್ಯಕ್ತಿಗಳಿಗೆ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ೭ನೇ ತರಗತಿ ಎಸ್.ಬಿ. ಚಾಂದಿನಿ ಮತ್ತು ಎಸ್.ಡಿ. ಕೃತಿಕಾ, ಎಸ್.ಎಸ್.ಎಲ್.ಸಿ.ಯ ಎಸ್.ಹೆಚ್. ಶಕ್ತಿಧರ ಮತ್ತು ಕೆ.ಎಂ. ದೀಕ್ಷ, ಪಿಯುಸಿಯ ಜೆ.ಎಲ್. ಹರ್ಷಿಣೆ, ಭಬೀತಾ, ಎ. ಮದುಮಿತ ಅವರುಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಕ್ರೀಡೆಯಲ್ಲಿ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಉಪಾಧ್ಯಕ್ಷ ಶ್ರೀಕಂಠಪ್ಪ ರಘು, ಕಾರ್ಯದರ್ಶಿ ವೇದಾ ಜಯರಾಜು ಸೇರಿದಂತೆ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು. ಮೊದಲಿಗೆ ಮಾಯಮುಡಿ ಧನುಗಾಲ ಶ್ರೀ ಮುರುಡೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕ್ರೀಡೆಗೆ ಚಾಲನೆ ನೀಡಲಾಯಿತು. ಕಾಶ್ಮಿರದ ಪೆಹಾಲ್ಗಾಂನಲ್ಲಿ ಉಗ್ರರ ದಾಳಿಗೆ ಬಲಿಯಾದವರಿಗೆ ಸಭೆಯ ಮೊದಲಿಗೆ ಸಂತಾಪ ಸೂಚಿಸಲಾಯಿತು. ಕ್ರೀಡಾಕೂಟದಲ್ಲಿ ಹಗ್ಗಜಗ್ಗಾಟ, ಥ್ರೋಬಾಲ್, ಪಾಸಿಂಗ್ ದ ಬಾಲ್, ನಿಂಬೆಹಣ್ಣು ಚಮಚ ಓಟ, ಮಕ್ಕಳಿಗೆ ಕಾಳು ಹೆಕ್ಕುವುದು, ಮಹಿಳೆಯರಿಗೆ ಪುರುಷರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.