ಮಡಿಕೇರಿ, ಮೇ ೨೧ : ಕೊಡಗು ಜಿಲ್ಲಾ ಹಾಪ್‌ಕಾಮ್ಸ್ ಹಾಗೂ ತೋಟ ಗಾರಿಕಾ ಇಲಾಖೆ ಸಹಯೋಗದೊಂದಿಗೆ ತಾ. ೨೩ ರಿಂದ ೨೬ರವರೆಗೆ ನಾಲ್ಕು ದಿನಗಳ ಕಾಲ ಮಾವು ಮತ್ತು ಹಲಸು ಮೇಳ ಏರ್ಪಡಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಹಾಪ್‌ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ಮಾತನಾಡಿ, ನಗರದ ಮುಖ್ಯ ರಸ್ತೆಯಲ್ಲಿರುವ ಅಂಚೆ ಕಚೇರಿ ಮುಂಭಾಗದಲ್ಲಿನ ಜಿಲ್ಲಾ ಹಾಪ್‌ಕಾಮ್ಸ್ ಕಚೇರಿ ಆವರಣದಲ್ಲಿ ಮಾವು ಮತ್ತು ಹಲಸು ಮೇಳ ಏರ್ಪ ಡಿಸಲಾಗಿದೆ. ೨೦೨೨ ರಿಂದ ಈ ಮೇಳ ಆಯೋಜನೆ ಮಾಡಿಕೊಂಡು ಬರಲಾ ಗುತ್ತಿದೆ. ಕಳೆದ ಬಾರಿ ೧೫ ಮಂದಿ ರೈತರು ಈ ಮೇಳದಲ್ಲಿ ಭಾಗವಹಿಸಿದ್ದು, ಈ ಬಾರಿ ಈಗಾಗಲೇ ೨೦ ಮಂದಿ ನೋಂದಣಿ ಮಾಡಿಕೊಂಡಿರುವುದಾಗಿ ತಿಳಿಸಿದರು.

ಕ್ಯಾಲ್ಸಿಯಂ ಕಾರ್ಬೈಡ್ ಮುಕ್ತ ಹಾಗೂ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳು ಮತ್ತು ರೈತರಿಂದ ನೇರ ಗ್ರಾಹಕರಿಗೆ ಎಂಬ ಪರಿಕಲ್ಪನೆಯಡಿ ಮೇಳವನ್ನು ರೂಪಿಸಲಾಗಿದೆ. ಕೆಲವರು ಮಾವಿನ ಕಾಯಿಯನ್ನು ಮಾಗಿಸಲು ರಾಸಾಯನಿಕಗಳನ್ನು ಬಳಸುತ್ತಾರೆ. ಇದರಿಂದ ಕ್ಯಾನ್ಸರ್ ಸೇರಿದಂತೆ ಇತರ ಕಾಯಿಲೆಗಳು ಬರುವ ಸಾಧ್ಯತೆಯಿದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿರುವುದರಿಂದ ರೈತರು ನೇರವಾಗಿ ವಿಷಮುಕ್ತ ಹಣ್ಣುಗಳನ್ನು ತಂದು ಮೇಳದಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ರಮೇಶ್ ತಿಳಿಸಿದರು.

ಉದ್ಘಾಟನೆ : ತಾ. ೨೩ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಶಾಸಕ ಡಾ. ಮಂತರ್ ಗೌಡ ಮೇಳ ಉದ್ಘಾಟನೆ ಮಾಡುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಹೆಚ್.ಆರ್. ಯೋಗೇಶ್ ಉಪಸ್ಥಿತರಿರುವರು ಎಂದು ರಮೇಶ್ ಹೇಳಿದರು.

ಲಾಭದಲ್ಲಿ ಸಂಘ : ಹಾಪ್‌ಕಾಮ್ಸ್ ತೋಟಗಾರಿಕೆ ಇಲಾಖೆಯ ಅಂಗ ಸಂಸ್ಥೆಯಾಗಿದ್ದು, ಸಹಕಾರ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕಾ ಮಾರಾಟ ಮಹಾಮಂಡಳಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. ರೈತರಿಂದ ನಿಗದಿತ ದರದಲ್ಲಿ ಹಣ್ಣು, ತರಕಾರಿಯನ್ನು ಖರೀದಿಸಿ ಗ್ರಾಹಕರಿಗೆ ಅರ್ಹ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಸಂಘದಲ್ಲಿ ಒಟ್ಟು ೧೪೯೦ ಸದಸ್ಯರಿದ್ದು, ಕಳೆದ ೧೪ ವರ್ಷಗಳಿಂದ ಸತತವಾಗಿ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ರಮೇಶ್ ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಕೋಣೆರಿರ ಮನೋಹರ್, ಬೇಬಿ ಪೂವಯ್ಯ, ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಮುತ್ತಪ್ಪ , ಕಾರ್ಯನಿರ್ವಹಣಾಧಿಕಾರಿ ರೇಶ್ಮ ಗಿರೀಶ್ ಉಪಸ್ಥಿತರಿದ್ದರು.