‘ಕುಟುಂಬಗಳ ಸಮ್ಮಿಲನಕ್ಕೆ ಕ್ರೀಡೆಗಳ ಆಯೋಜನೆ’
ವೀರಾಜಪೇಟೆ, ಮೇ ೧೮: ಜಿಲ್ಲೆಯಲ್ಲಿ ನೆಲೆಸಿರುವ ವಿವಿಧ ಕುಟುಂಬಗಳು ವಿವಿಧ ಕ್ರೀಡೆಗಳನ್ನು ಆಯೋಜಿಸುತ್ತಿವೆ. ಇದೇ ರೀತಿ ಕುಟುಂಬಗಳನ್ನು ಒಂದೂಗೂಡಿಸುವ ಸಲುವಾಗಿ ಬಲಿಜ ನಾಯ್ಡು ಸಮಾಜವು ಕ್ರಿಕೆಟ್ ಪಂದ್ಯಾಟ ಆಯೋಜಿಸಿದೆ ಎಂದು ಸಮಾಜದ ಪ್ರಮುಖರಾದ ಟಿ.ಪಿ. ರಮೇಶ್ ಹೇಳಿದರು.
ಬಲಿಜ ನಾಯ್ಡು ಸಮಾಜದ ಅಂಗ ಸಂಸ್ಥೆಯಾದ ನಾಯ್ಡುಸ್ ಸ್ಪೋರ್ಟ್ಸ್ ಕ್ಲಬ್ ಕೊಡಗು ವತಿಯಿಂದ ಮೂರ್ನಾಡು ಕಾಲೇಜು ಮೈದಾನದಲ್ಲಿ ೨ನೇ ವರ್ಷದ ಬಲಿಜ ಸಮಾಜದ ಕುಟುಂಬಗಳ ಕ್ರಿಕೆಟ್ ಪಂದ್ಯಾಟಗಳನ್ನು ಆಯೋಜಿಸಲಾಗಿತ್ತು. ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಟಿ.ಪಿ. ರಮೇಶ್ ಅವರು, ಕ್ರೀಡೆಯನ್ನು ಉತ್ತೇಜನ ಮಾಡುವ ಹಿನ್ನೆಲೆಯಲ್ಲಿ ಕ್ರಿಕೆಟ್ ಪಂದ್ಯಾಟವನ್ನು ಸಂಘಟಕರು ಆಯೋಜಿಸಿದ್ದಾರೆ. ಸೋಲು - ಗೆಲುವು ಜೀವನದ ಅಂಶ. ಸೋತವರು ಗೆಲ್ಲಬೇಕು. ಗೆದ್ದವರು ಸೋಲಬೇಕು. ಆಟದಲ್ಲಿ ಆಸಕ್ತಿಯನ್ನಿಟ್ಟು ಎಲ್ಲರೂ ಒಂದಾಗಿ ಸೇರಿ ಕ್ರೀಡಾಕೂಟ ನಡೆದಿದೆ. ಇನ್ನು ಮಂದೆಯೂ ಕ್ರೀಡಾಕೂಟಗಳು ನಡೆಯಬೇಕು ಮತ್ತು ಸಮಾಜದ ಎಲ್ಲಾ ಕುಟುಂಬಗಳು ಸಕ್ರಿಯವಾಗಿ ಭಾಗವಹಿಸುವಂತಾಗಬೇಕು ಎಂದರು.
ಉದ್ಯಮಿಗಳಾದ ರೋಹಿತ್ ಆನಂದ್ ಮಾತನಾಡಿ, ಸಂಘಟಕರು ದ್ವಿತೀಯ ವರ್ಷದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದಾರೆ. ಮೂರನೇ ಆವೃತ್ತಿಯನ್ನು ಇನ್ನೂ ಉತ್ತಮ ರೀತಿಯಲ್ಲಿ ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ದಯಾನಂದ್ ಮೈಸೂರು ಮತ್ತು ಮಂಜುನಾಥ್ ಸಿದ್ದಾಪುರ ಅವರುಗಳು ಮಾತನಾಡಿದರು. ನಾಯ್ಡುಸ್ ಸ್ಪೋರ್ಟ್ಸ್ ಕ್ಲಬ್ ಕೊಡಗು ಅಧ್ಯಕ್ಷ ಶ್ರೀನಿವಾಸ್ ಲೋಕನಾಥ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಾಂಗದ ಸರ್ವರು ಒಂದಾಗಬೇಕು. ಕುಟುಂಬಗಳ ಮಧ್ಯೆ ಸಾಮರಸ್ಯ ಬೆಳೆಯಬೇಕು ಎನ್ನುವ ಸದುದ್ದೇಶದಿಂದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಇದು ಎರಡನೇ ಆವೃತ್ತಿಯಾಗಿದ್ದು, ಮುಂದಿನ ವರ್ಷವು ವಿವಿಧ ಕ್ರೀಡೆಗಳನ್ನು ಒಳಗೊಂಡAತೆ ಪಂದ್ಯಾಟಗಳನ್ನು ಆಯೋಜಿಸಲಾಗುತ್ತದೆ. ಈ ಹಿಂದೆ ಸಮಾಜದ ಬಾಂಧವರು ನೀಡಿರುವ ಸಹಕಾರದಿಂದ ಕ್ರೀಡಾಕೂಟ ಉತ್ತಮವಾಗಿ ಮೂಡಿಬಂದಿದೆ. ಮುಂದೆಯೂ ಜನಾಂಗ ಬಾಂಧವರು ಹೆಚ್ಚಿನ ಸಹಕಾರವನ್ನು ನೀಡುವಂತೆ ಮನವಿ ಮಾಡಿದರು.
ನಾಯ್ಡುಸ್ ಸ್ಪೋರ್ಟ್ಸ್ ಕ್ಲಬ್ ಕೊಡಗು ಉಪಾಧ್ಯಕ್ಷ ಟಿ.ಜಿ. ಹರ್ಷ, ಬಲಿಜ ಸಮಾಜದ ಪ್ರಮುಖರಾದ ಗಣೇಶ್ ಎಲ್.ಐ.ಸಿ. ಶ್ರೀನಿವಾಸ್ ನಾಪೋಕ್ಲು, ವಿಜಯ ಕುಮಾರ್ ಸಿದ್ದಾಪುರ, ದೇವಯ್ಯ, ಕಾವೇರಪ್ಪ ಪೆರುಂಬಾಡಿ ನವನೀತ್ ಕುಶಾಲನಗರ ಉಪಸ್ಥಿತರಿದ್ದರು.
ನಾಯ್ಡುಸ್ ಸ್ಪೋರ್ಟ್ಸ್ ಕ್ಲಬ್ ಕೊಡಗು ಉಪಾಧ್ಯಕ್ಷ ಟಿ.ಜಿ. ಹರ್ಷ ಸ್ವಾಗತಿಸಿ, ವಂದಿಸಿದರು.
ಕ್ರೀಡಾ ವರದಿ
ಮೂರ್ನಾಡು ಕಾಲೇಜು ಮೈದಾನದಲ್ಲಿ ಎರಡು ದಿನಗಳ ಕಾಲ ಕ್ರಿಕೆಟ್ ಪಂದ್ಯಾಟಗಳು ನಡೆದವು. ಪಂದ್ಯಾಟಗಳು ಲೀಗ್ ಮಾದರಿಯಲ್ಲಿದ್ದು ಒಟ್ಟು ೬ ಓವರ್ಗಳಿಗೆ ಸೀಮಿತವಾಗಿತ್ತು. ಪಂದ್ಯಾಟದಲ್ಲಿ ಒಟ್ಟು ಜಿಲ್ಲೆಯ ೮ ತಂಡಗಳು ಭಾಗವಹಿಸಿದ್ದವು. ನಾಲ್ಕು ತಂಡಗಳು ಅಂತಿಮ ಸುತ್ತಿಗೆ ಪ್ರವೇಶ ಪಡೆದವು. ಪ್ರಥಮ ಸೆಮಿಫೈನಲ್ ಪಂದ್ಯಾಟದಲ್ಲಿ ಸ್ಟಾರ್ಟನ್ಸ್ ನಾಪೋಕ್ಲು ತಂಡ ೬ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೪೫ ರನ್ ಗಳಿಸಿತು. ಪ್ಯಾಂರ್ಸ್ ಪೆರುಂಬಾಡಿ ೨.೫ ಓವರ್ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೪೮ ರನ್ಗಳಿಸಿ ಜಯಿಸಿ ಫೈನಲ್ ಪ್ರವೇಶ ಪಡೆಯಿತು. ದ್ವಿತೀಯ ಸೆಮಿಫೈನಲ್ಸ್ ಪಂದ್ಯಾಟದಲ್ಲಿ ಆರ್.ಸಿ.ಬಿ. ಬೈಲುಕುಪ್ಪೆ ೬ ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ೫೮ ರನ್ ಗಳಿಸಿತು. ಬಳಿಕ ಬ್ಯಾಟಿಂಗ್ ಮಾಡಿದ ಕೊಡಗು ಯೂತ್ ವಾರಿರ್ಸ್ ತಂಡ ೬ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೫೪ ರನ್ಗಳಿಸಿ ಸೋಲು ಅನುಭವಿಸಿತು. ಫೈನಲ್ ಪಂದ್ಯಾಟ ಆರ್.ಸಿ.ಬಿ. ಬೈಲುಕುಪ್ಪೆ ಮತ್ತು ಪೆರುಂಬಾಡಿ ಪ್ಯಾಂರ್ಸ್ ತಂಡಗಳ ಮಧ್ಯೆ ನಡೆಯಿತು. ಪ್ರಥಮ ಬ್ಯಾಟಿಂಗ್ ಮಾಡಿದ ಆರ್.ಸಿ.ಬಿ. ಬೈಲುಕುಪ್ಪೆ ತಂಡ ನಿಗದಿತ ೬ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೪೩ ರನ್ ಗಳಿಸಿತು. ೪೪ ರನ್ ಗುರಿ ಬೆನ್ನಟ್ಟಿದ ಪೆರುಂಬಾಡಿ ಪ್ಯಾಂರ್ಸ್ ತಂಡ ೩.೩ ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ೪೪ ರನ್ ಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಚಾಂಪಿಯನ್ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ರೂ. ೧೫,೦೦೦ ನಗದು, ದ್ವಿತೀಯ ತಂಡಕ್ಕೆ ಟ್ರೋಫಿ ಮತ್ತು ರೂ. ೧೦,೦೦೦ ನಗದು ನೀಡಿ ಗೌರವಿಸಲಾಯಿತು. ಪಂದ್ಯಾಟದಲ್ಲಿ ಸರಣಿ ಶ್ರೇಷ್ಟ, ಪಂದ್ಯ ಪರುಶೋತ್ತಮ, ಮತ್ತು ಇನ್ನಿತರ ವೈಯಕ್ತಿಕ ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು.
ನಾಯ್ಡುಸ್ ಸ್ಪೋರ್ಟ್ಸ್ ಕ್ಲಬ್ ಕೊಡಗುನ ಚೇತನ್ ಟಿ.ಪಿ., ವಿನೋದ್ ಟಿ.ಜಿ., ತೇಜಸ್ ಟಿ.ವಿ., ಕಾರ್ತಿಕ್, ಪದ್ಮನಾಭ ಕೆ., ಅವರುಗಳು ಸೇರಿದಂತೆ, ಬಲಿಜ ಸಮಾಜದ ಪ್ರಮುಖರು, ಸಮಾಜ ಬಾಂಧವರು, ಮಹಿಳೆಯರು, ಮಕ್ಕಳು ಆಧಿಕ ಸಂಖ್ಯೆಯಲ್ಲಿ ಹಾಜರಿದ್ದರು.