ಸಿದ್ದಾಪುರ, ಮೇ ೮ : ಬಾಡಗ ಬಾಣಂಗಾಲ ಗ್ರಾಮದ ಮಠದಲ್ಲಿ ಹುಲಿ ಹಸುವಿನ ಮೇಲೆ ದಾಳಿ ನಡೆಸಿ ಕೊಂದಿರುವ ಸ್ಥಳಕ್ಕೆ ಮತ್ತೆ ಬುಧವಾರ ರಾತ್ರಿ ಹುಲಿ ಬಂದಿರುವ ಹೆಜ್ಜೆ ಗುರುತುಗಳು ಪತ್ತೆ ಆಗಿದೆ.
ಬಾಡಗ ಬಾಣಂಗಾಲ ಗ್ರಾಮದ ನಿವಾಸಿ ಮಠದ ಜಾನ್ ಫಿಲೋಮಿನಾ ಎಂಬವರಿಗೆ ಸೇರಿದ ಹಾಲು ಕರೆಯುವ ಹಸುವಿನ ಮೇಲೆ ಹಾಡಹಗಲೇ ಹುಲಿ ದಾಳಿ ಮಾಡಿ ಹಸುವನ್ನು ಕೊಂದುಹಾಕಿತ್ತು. ಹಸುವಿನ ಮೃತದೇಹವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಇರಿಸಿದ್ದರು. ಘಟನಾ ಸ್ಥಳದಲ್ಲಿದ್ದ ಹಸುವಿನ ಮೃತ ದೇಹದ ಬಳಿ ರಾತ್ರಿ ಸಮಯದಲ್ಲಿ ಹುಲಿಯು ಬೇರೆ ಮಾರ್ಗವಾಗಿ ಸ್ಥಳಕ್ಕೆ ಬಂದಿರುವ ಕುರುಹುಗಳು ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೀಗ ಅರಣ್ಯ ಇಲಾಖೆ ಸಿಬ್ಬಂದಿಗಳು ರಾತ್ರಿ ಸಮಯದಲ್ಲಿ ಗಸ್ತುತಿರುಗುತ್ತಿದ್ದಾರೆ. ಹುಲಿಯ ಚಲನವಲನವನ್ನು ಕಂಡುಹಿಡಿಯಲು ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ತಿತಿಮತಿ ವಲಯ ಉಪ ಅರಣ್ಯ ಅಧಿಕಾರಿ ಶಶಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬಾಡಗ ಬಾಣಂಗಾಲ ಗ್ರಾಮ ವ್ಯಾಪ್ತಿಯಲ್ಲಿ ಖಾಸಗಿ ಸಂಸ್ಥೆಗಳಿಗೆ ಸೇರಿದ ಕಾಫಿ ತೋಟಗಳಲ್ಲಿ ಬೀಡಾಡಿ ದನಗಳು ಹೆಚ್ಚಾಗಿ ಕಂಡು ಬರುತ್ತಿದ್ದು ಇವುಗಳ ಮೇಲೆ ಕೂಡ ಹುಲಿಗಳು ದಾಳಿ ನಡೆಸಿ ಸಾಯಿಸಿದ ಘಟನೆಗಳು ಕೂಡ ಅರಣ್ಯ ಇಲಾಖೆಗೆ ಮಾಹಿತಿ ದೊರೆತಿದೆ. ಆಹಾರವನ್ನು ಅರಸಿಕೊಂಡು ಕಾಡಿನಿಂದ ನಾಡಿಗೆ ಬಂದಿರುವ ಹುಲಿಯು ಕಾಫಿ ತೋಟದೊಳಗೆ ಸಂಚರಿಸುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸ್ಥಳೀಯ ನಿವಾಸಿಗಳು ಕಳೆದೆರಡು ದಿನಗಳ ಹಿಂದೆ ಹುಲಿಯನ್ನು ಪ್ರತ್ಯಕ್ಷವಾಗಿ ಕಂಡಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಹುಲಿ ಕಾಫಿ ತೋಟದೊಳಗೆ ಸಂಚರಿಸುತ್ತಿರುವುದು ಖಚಿತವಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಅನಾಹುತಗಳು ಸಂಭವಿಸುವ ಮುಂಚಿತ ಅರಣ್ಯ ಇಲಾಖೆಯು ಮುಂಜಾಗ್ರತಾ ಕ್ರಮ ವಹಿಸಿ ಹುಲಿಯನ್ನು ಸೆರೆಹಿಡಿಯಲು ಸರ್ಕಾರದಿಂದ ತ್ವರಿತ ಗತಿಯಲ್ಲಿ ಆದೇಶ ಪಡೆದು ಸೆರೆ ಹಿಡಿದು ಸ್ಥಳಾಂತರ ಮಾಡುವುದು ಸೂಕ್ತ ಎಂದು ಗ್ರಾಮಸ್ಥರು ಅಭಿಪ್ರಾಯಿಸಿದ್ದಾರೆ.
ಬೋನ್ ಅಳವಡಿಕೆ
ಹುಲಿ ಹಸುವಿನ ಮೇಲೆ ದಾಳಿ ನಡೆಸಿ ಸಾಯಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಹುಲಿ ಸೆರೆಗೆ ಬೋನ್ ಅಳವಡಿಸಲಾಗಿದೆ. ಹುಲಿ ಇದೇ ಜಾಗದಲ್ಲಿ ಇರುವುದು ಖಚಿತವಾದ ಹಿನ್ನೆಲೆಯಲ್ಲಿ ಹುಲಿಯ ಸೆರೆಗೆ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಉಪವಲಯ ವಲಯ ಅರಣ್ಯ ಅಧಿಕಾರಿ ಶಶಿ ಅವರುಗಳು ಕಾಫಿ ತೋಟದೊಳಗೆ ಬೋನ್ ಅಳವಡಿಸಿ ಸತ್ತ ಹಸುವಿನ ಕಳೆ ಬರವನ್ನು ಅದರ ಒಳಗೆ ಇರಿಸಿ ಸೊಪ್ಪು ಮುಚ್ಚಿ ಇಡಲಾಗಿದೆ. ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ. ಮತ್ತು ಆನೆ ಕಾರ್ಯಪಡೆ ತಂಡದ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.