ಗೋಣಿಕೊಪ್ಪಲು, ಮೇ.೮: ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ - ಬಾಣಂಗಾಲ ಗ್ರಾಮದ ಮಠ ಎಂಬಲ್ಲಿ ರೈತರೊಬ್ಬರ ಹಸುವನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮದ ಅಂಗನವಾಡಿ ಕೇಂದ್ರದ ಆವರಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಸಿದ ಸಂಕೇತ್ ಪೂವಯ್ಯ, ಹುಲಿ ಸೆರೆಗೆ ತಕ್ಷಣ ಕ್ರಮ ಕೈಗೊಳ್ಳುವ ಸಲುವಾಗಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಹಸುವನ್ನು ಕೊಂದಿರುವ ಜಾಗದಲ್ಲಿ ಹುಲಿ ಸೆರೆಗೆ ಬೇಕಾದ ಬೋನ್ ಅಳವಡಿಕೆ, ಅಗತ್ಯ ಸಿಬ್ಬಂದಿಗಳ ನಿಯೋಜನೆ, ಕ್ಯಾಮರಾ ಅಳವಡಿಕೆ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗ್ರಾಮದ ಹಿರಿಯರಾದ ಹಾಗೂ ವಕೀಲರಾದ ಹೇಮಚಂದ್ರ ಮಾತನಾಡಿ ಈ ಭಾಗದಲ್ಲಿ ಹುಲಿ ಹಾಗೂ ಕಾಡಾನೆಗಳ ಉಪಟಳ ತಾಳಲಾರದೆ ಜನರು ಕಂಗಾಲಾಗಿದ್ದಾರೆ. ತೋಟದಲ್ಲಿ ಕಾಡಾನೆಗಳ ಉಪಟಳದಿಂದ ಫಸಲು ನಾಶವಾಗಿದೆ ಎಂದು ಹೇಳಿದರು.

ಹಸುವನ್ನು ಕಳೆದುಕೊಂಡ ಜಾನ್ ಎಂಬವರಿಗೆ ಇಲಾಖೆಯ ವತಿಯಿಂದ ಕೂಡಲೇ ಪರಿಹಾರ ವಿತರಣೆ ಮಾಡಲು ಅಧಿಕಾರಿಗಳಿಗೆ ಸಂಕೇತ್ ಪೂವಯ್ಯ ನಿರ್ದೇಶನ ನೀಡಿದರು. ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಆರ್‌ಎಫ್‌ಓ ಶಶಿ ತಿಳಿಸಿದರು. ಮಾಲ್ದಾರೆ ಗ್ರಾಮ ಪಂಚಾಯಿತಿ ಸದಸ್ಯರಾದ ಮೊಹಮ್ಮದ್ ಅಲಿ, ಕುರಿಯಾ ಕೋಸ್, ವಿ.ಸಿ.ಚಂದ್ರ, ನಜೀರ್, ಪ್ರವೀಣ್, ಸುರೇಶ್ ಮುಂತಾದವರು ಉಪಸ್ಥಿತರಿದ್ದರು.