ಮಡಿಕೇರಿ, ಮೇ ೮: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಹಿಳಾ ಸಾಹಿತಿಗಳಿಗೆ ಮೀಸಲಾಗಿ ಇಟ್ಟಿರುವ ದತ್ತಿ ‘ವಿಜಯ ವಿಷ್ಣುಭಟ್ ದತ್ತಿ ಪ್ರಶಸ್ತಿ’ಗೆ ಜಿಲ್ಲೆಯ ಹಿರಿಯ ಸಾಹಿತಿಗಳಾದ ಸ್ಮಿತಾ ಅಮೃತರಾಜ್ ಸಂಪಾಜೆ ರಚಿಸಿದ ಕಥಾ ಸಂಕಲನ "ಹಾಯ್ ಮೆಟಾಯ್" ಕೃತಿಯು ಪುರಸ್ಕೃತಗೊಂಡಿದೆ. ಜಿಲ್ಲೆಯ ಹಿರಿಯ ಸಾಹಿತಿ ವಿಜಯ ವಿಷ್ಣುಭಟ್ ಸ್ಥಾಪಿಸಿರುವ ಈ ದತ್ತಿಯ ಮೊದಲ ಪ್ರಶಸ್ತಿ ಇದಾಗಿದ್ದು, ಈ ದತ್ತಿ ಪ್ರಶಸ್ತಿಯ ಆಯ್ಕೆಗಾಗಿ ಜಿಲ್ಲೆಯ ಬರಹಗಾರರ ಕೃತಿಗಳನ್ನು ಆಹ್ವಾನಿಸಿದಾಗ ಹತ್ತು ಸಾಹಿತಿಗಳು ತಮ್ಮ ಕೃತಿಗಳನ್ನು ಪ್ರಸ್ತುತಪಡಿಸಿದ್ದರು.

ಜಿಲ್ಲೆಯ ಹಿರಿಯ ಮೂವರು ಸಾಹಿತಿಗಳು ಪ್ರತ್ಯೇಕವಾಗಿ ಈ ಪುಸ್ತಕಗಳನ್ನು ಪರಿಶೀಲಿಸಿ ನೀಡಿದ ಅಂಕಗಳನ್ನು ಜಿಲ್ಲಾ ಸಮಿತಿ ಒಟ್ಟುಗೂಡಿಸಿ ಹತ್ತು ಜನ ಲೇಖಕರಲ್ಲಿ ಅತಿ ಹೆಚ್ಚು ಅಂಕ ಪಡೆದ "ಹಾಯ್ ಮೆಟಾಯ್" ಕೃತಿಯ ಲೇಖಕಿಯಾದ ಸ್ಮಿತಾ ಅಮೃತ್ ರಾಜ್ ಸಂಪಾಜೆ ಪ್ರಶಸ್ತಿಗೆ ಪುರಸ್ಕೃ್ತತಗೊಂಡಿದ್ದಾರೆ. ಮುಂದೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.