ಸೋಮವಾರಪೇಟೆ, ಮೇ ೮: ಬಸವ ಜಯಂತಿ ಅಂಗವಾಗಿ ಪಟ್ಟಣದ ವೀರಶೈವ ಸಮಾಜದ ವತಿಯಿಂದ ಪ್ರಭಾತ್ ಭೇರಿ ಕಾರ್ಯಕ್ರಮ ನಡೆಯಿತು. ವಿರಕ್ತ ಮಠದ ಆವರಣ ದಿಂದ ಪ್ರಭಾತ್ ಭೇರಿ ಹೊರಟು ಕಕ್ಕೆಹೊಳೆ ಬಳಿ ಇರುವ ಬಸವೇಶ್ವರ ಪ್ರತಿಮೆಗೆ ಹಾರ ಹಾಕಿ ಪೂಜೆ ಸಲ್ಲಿಸಲಾಯಿತು. ನಂತರ ಬಸವೇಶ್ವರ ದೇವಾಲಯದಲ್ಲಿ ಪೂಜೆ ಹಾಗೂ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಜರುಗಿತು. ಸಂಜೆ ವಿರಕ್ತ ಮಠದ ಶ್ರೀ ನಿಶ್ಚಲದೇಶಿ ಕೇಂದ್ರ ಸ್ವಾಮೀಜಿಯವರ ಸಾನಿಧ್ಯದಲ್ಲಿ, ವೀರಶೈವ ಸಮಾಜದ ಬಸವೇಶ್ವರ ಯುವಕ ಸಂಘದ ವತಿಯಿಂದ ವಚನ ಗಾಯನ ನಡೆಯಿತು. ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಯಜಮಾನ ಬಿ.ಪಿ. ಶಿವಕುಮಾರ್, ಶೆಟ್ರು ಬಿ.ಆರ್. ಮೃತ್ಯುಂಜಯ, ಅಕ್ಕನ ಬಳಗದ ಉಪಾಧ್ಯಕ್ಷೆ ಸರಿತಾ, ಬಸವೇಶ್ವರ ಯುವಕ ಸಂಘದ ಅಧ್ಯಕ್ಷÀ ಕೆ.ಜೆ. ಗಿರೀಶ್ ಸೇರಿದಂತೆ ಇತರರು ಇದ್ದರು. ಮಹಾ ಮಂಗಳಾರತಿ ನಂತರ ದಾಸೋಹ ನಡೆಯಿತು.