ಸೋಮವಾರಪೇಟೆ, ಮೇ ೮: ಇಲ್ಲಿನ ನಾವು ಪ್ರತಿಷ್ಠಾನ ಸಂಸ್ಥೆಯ ವತಿಯಿಂದ ಮಕ್ಕಳ ಬಾಲ್ಯ ಕಟ್ಟುವ ಹಬ್ಬ ಎಂಬ ಹೆಸರಿನಲ್ಲಿ ಕಳೆದ ೨೦ ದಿನಗಳಿಂದ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರ ಸಮಾರೋಪಗೊಂಡಿತು.

ಶಿಬಿರಾರ್ಥಿಗಳು ತಾವು ಕಲಿತ ಗ್ರಾಮೀಣ ಆಟಗಳನ್ನು ಪ್ರದರ್ಶಿಸಿದರು. ತಾವೇ ರಚಿಸಿದ ಚಿಕ್ಕಪುಟ್ಟ ಕವನಗಳನ್ನು ವಾಚಿಸಿ ಸಂಭ್ರಮಿಸಿದರು. ಮಕ್ಕಳು ಬಿಡಿಸಿದ ಕಾಲ್ಪನಿಕ ಚಿತ್ರಗಳನ್ನು ಫ್ರೇಮ್‌ನಲ್ಲಿ ಅಳವಡಿಸಿ ಪೋಷಕರಿಗೆ ನೀಡಲಾಯಿತು. ಶಿಬಿರದಲ್ಲಿ ಮಕ್ಕಳು ತಮ್ಮ ಕನಸುಗಳು ಹಾಗೂ ಗುರಿಯ ಬಗ್ಗೆ ಬರೆದ ಪತ್ರಗಳನ್ನು ಪೋಷಕರಿಗೆ ನೀಡಲಾಯಿತು. ಗ್ರಾಮೀಣ ಆಟಗಳನ್ನು ಉಳಿಸುವ ನಿಟ್ಟಿನಲ್ಲಿ ಪೊಲೀಸ್ ರಕ್ಷಣೆಯಲ್ಲಿ ಜಾಗೃತಿ ಜಾಥಾ ಪಟ್ಟಣದ ರಸ್ತೆಯಲ್ಲಿ ನಡೆಯಿತು. ಮಕ್ಕಳು ರಸ್ತೆಯಲ್ಲೆ ಬೇರಿಂಗ್ ಗಾಡಿಯನ್ನು ಚಾಲಿಸಿದರು. ಸೈಕಲ್ ಟಯರನ್ನು ಮರದ ಕೋಲಿನಿಂದ ಚಾಲಿಸಿದರು. ವಿವಿಧ ಗ್ರಾಮೀಣ ಆಟಿಕೆಗಳನ್ನು ಮಕ್ಕಳು ಪ್ರದರ್ಶಿಸಿದರು. ವೇದಿಕೆಯಲ್ಲಿ ಕಿರು ನಾಟಕ ಪ್ರದರ್ಶಿಸಿ, ನೃತ್ಯ ಮಾಡಿ, ಹಾಡು ಹಾಡಿ ಪೋಷಕರಿಂದ ಚಪ್ಪಾಳೆ ಗಿಟ್ಟಿಸಿದರು. ನಾವು ಪ್ರತಿಷ್ಠಾನದ ಕಾರ್ಯಕಾರಿ ನಿರ್ದೇಶಕರಾದ ಸುಮನ ಮ್ಯಾಥ್ಯು ಮಾತನಾಡಿ, ಶಿಬಿರದಲ್ಲಿ ಪ್ರತಿಭಾವಂತ ಸಂಪನ್ಮೂಲ ವ್ಯಕ್ತಿಗಳು ಗುರಿ, ಸಾಧನೆ, ಕಲಿಕೆ, ಮೂಢನಂಬಿಕೆ, ವಿಜ್ಞಾನದ ಮಹತ್ವ, ಆರೋಗ್ಯ, ಸಾಮಾಜಿಕ ಕರ್ತವ್ಯಗಳು ಇಂತಹ ಅನೇಕ ವಿಷಯಗಳ ಬಗ್ಗೆ ಮಕ್ಕಳಿಗೆ ಕಲಿಸಿದ್ದಾರೆ ಎಂದರು.

ನಾವು ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ‘ಹಕ್ಕಿಗೊಂದು ಗುಟುಕು’ ಅಭಿಯಾನದಲ್ಲಿ ಭಾಗವಹಿಸಿ, ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರು ಇಟ್ಟು, ಫೋಟೋ ಕಳುಹಿಸಿ ಬಹುಮಾನ ಗೆದ್ದ ವೀರಾಜಪೇಟೆಯ ಪೂಜಾ ಜಗತ್ ಮತ್ತು ಮೈಸೂರಿನ ಲಿಖಿತ ಅವರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭ ನಾವು ಪ್ರತಿಷ್ಠಾನದಲ್ಲಿ ಕೆಲಸ ಮಾಡುತ್ತಿರುವ ಮಕ್ಕಳ ಹಕ್ಕುಗಳ ಪ್ರತಿನಿಧಿಗಳಾದ ಪಿ.ಬಿ. ಪೊನ್ನಪ್ಪ, ಎಂ.ಜೆ. ಪ್ರಜ್ವಲ್, ರವಿಚಂದ್ರ, ಬಿ.ಕೆ. ಕುಮಾರಿ, ಶಶಿಕುಮಾರ್ ಅವರುಗಳನ್ನು ಗೌರವಿಸಲಾಯಿತು. ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು, ಖುಷಿ, ಬಿಜ್ಜು ಕಾರ್ಯಕ್ರಮ ನಿರ್ವಹಿಸಿದರು.