ಪೊನ್ನಂಪೇಟೆ, ಮೇ.೨: ಎಮ್ಮೆಮಾಡಿನ ಸೂಫಿ ಶಹೀದ್ ವಲಿಯುಲ್ಲಾರವರ ಭೇಟಿಯ ಸ್ಮರಣಾರ್ಥಕವಾಗಿ ವರ್ಷಂಪ್ರತಿ ನಡೆಯುವ ಇತಿಹಾಸ ಪ್ರಸಿದ್ಧ ಕುತ್ತುನಾಡ್ ಉರೂಸ್ ನೇರ್ಚೆ ತಾ. ೫ರಂದು ಜರುಗಲಿದೆ.
ಹಿಂದೂ ಮತ್ತು ಮುಸ್ಲಿಂ ಮತ ಸೌಹಾರ್ದತೆಯ ಪ್ರತೀಕವಾಗಿ ಶತಮಾನಗಳಿಂದ ನಡೆದು ಬರುತ್ತಿರುವ ಈ ಸಾಮರಸ್ಯದ ಕುತ್ತುನಾಡ್ ಉರೂಸ್ ನೇರ್ಚೆ ಬಿ.ಶೆಟ್ಟಿಗೇರಿ ಸಮೀಪದ ಕೊಂಗಣ ಗ್ರಾಮದಲ್ಲಿರುವ ಸೂಫಿ ಶಹೀದ್ ಅವರ ನೇರ್ಚೆ ಬಿಡಾರದ ಆವರಣದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ ೮:೩೦ ಗಂಟೆಗೆ ಕೊಂಗಣ ಗ್ರಾಮದ ಕರ್ತೂರ ಕುಟುಂಬದ ತಕ್ಕ ಮುಖ್ಯಸ್ಥರಾದ ಕೆ.ಕೆ. ದೇವಯ್ಯ ಮತ್ತು ಬೇಗೂರು-ಮಾಪಿಳ್ಳೆತೋಡು ಗ್ರಾಮದ ತಕ್ಕ ಮುಖ್ಯಸ್ಥರಾದ ಆಲೀರ ಎ. ಕುಟ್ಟಿಯಾಲಿ ಅವರು ಜಂಟಿಯಾಗಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ನಡೆಯುವ ಸಾಮೂಹಿಕ ಪ್ರಾರ್ಥನೆಗೆ ಬೇಗೂರು-ಮಾಪಿಳ್ಳೆತೋಡು ಕಲ್ಲಾಯಿ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ರಜಾಕ್ ಸಖಾಫಿ ನೇತೃತ್ವ ನೀಡಲಿದ್ದಾರೆ. ಬೆಳಿಗ್ಗೆ ೯ ಗಂಟೆಗೆ ಭಂಡಾರ ಜಮಾಯಿಸುವ ಕಾರ್ಯಕ್ರಮ ಆರಂಭಗೊಳ್ಳಲಿದೆ. ಇದಾದ ನಂತರ ಬೆಳಿಗ್ಗೆ ೧೦ ಗಂಟೆಗೆ ಹಾಲು-ಅನ್ನ ಪ್ರಸಾದ ವಿತರಣೆ ಜರುಗಲಿದೆ. ಮಧ್ಯಾಹ್ನ ೧೨ ಗಂಟೆಗೆ ಮೌಲೂದ್ ಪಾರಾಯಣ, ಇದಾದ ನಂತರ ಹರಕೆ ರೂಪದಲ್ಲಿ ಬಂದ ವಸ್ತುಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ಮಧ್ಯಾಹ್ನ ೨ ಗಂಟೆಗೆ ಸಾಮೂಹಿಕ ಅನ್ನ ಸಂತರ್ಪಣೆ ಆಯೋಜಿಸಲಾಗಿದೆ ಎಂದು ಬೇಗೂರು ಕಲ್ಲಾಯಿ ಜುಮಾ ಮಸೀದಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.