ನಾಪೋಕ್ಲು, ಏ. ೧೨: ವಿದ್ಯಾರ್ಥಿಗಳು ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಂಡು ರಜಾ ಅವಧಿಯ ಸದುಪಯೋಗಪಡೆದುಕೊಳ್ಳಬೇಕು ಎಂದು ನಿವೃತ ಏರ್ ಫೋರ್ಸ್ ಅಧಿಕಾರಿ ಕೊಂಡಿರ ಗಣೇಶ್ ನಾಣಯ್ಯ ಹೇಳಿದರು.
ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ಇಲ್ಲಿಯ ಕೆಪಿಎಸ್ ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ೨೫ನೇ ವರ್ಷದ ಹಾಕಿ ಹಾಗೂ ಇನ್ನಿತರ ಬೇಸಿಗೆ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಿರಿಯರಾದ ದಿ.ಕಲಿಯಂಡ ಸಾಬು ಅಯ್ಯಣ್ಣ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕ್ರೀಡಾ ಅಕಾಡೆÀಮಿ ಸ್ಥಾಪಿಸಿದ ಬಳಿಕ ೨೫ ವರ್ಷಗಳಲ್ಲಿ ನಿರಂತರವಾಗಿ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಾ ಬರಲಾಗುತ್ತಿದ್ದು ಹಲವು ವಿದ್ಯಾರ್ಥಿಗಳು ತರಬೇತಿ ಪಡೆದು ಉನ್ನತ ಸ್ಥಾನ ಹೊಂದಿದ್ದಾರೆ. ಹಲವು ಕ್ರೀಡಾಪಟು ಗಳಾಗಿ ಹೊರಹೊಮ್ಮಿದ್ದಾರೆ. ವಿದ್ಯಾರ್ಥಿಗಳ ಏಳಿಗೆಯಲ್ಲಿ ಪೋಷಕರ ಪಾತ್ರ ಮುಖ್ಯ. ತರಬೇತು ದಾರರು ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ. ಅಭ್ಯಾಸದ ವೇಳೆ ಉತ್ತಮ ತರಬೇತಿಯನ್ನು ವಿದ್ಯಾರ್ಥಿಗಳು ಪಡೆದುಕೊಂಡು ಉನ್ನತಿ ಸಾಧಿಸಬೇಕು ಎಂದರು.
ಈ ಸಂದರ್ಭ ಇತ್ತೀಚೆಗೆ ನಿಧನರಾದ ಅಕಾಡೆಮಿ ಸ್ಥಾಪಕ ಅಧ್ಯಕ್ಷ ಕಲಿಯಂಡ ಸಾಬು ಅಯ್ಯಣ್ಣ ಅವರಿಗೆ ಶ್ರದ್ಧಾಂಜಲಿ ಅರ್ಪಿಸ ಲಾಯಿತು. ನುರಿತ ತರಬೇತುದಾರರಿಂದ ವಿದ್ಯಾರ್ಥಿಗಳಿಗೆ ಹಾಕಿ ತರಬೇತಿ ಜೊತೆಗೆ ಸಾಂಸ್ಕೃತಿಕ ತರಬೇತಿಯನ್ನು ಅಕಾಡೆಮಿ ಮೂಲಕ ನೀಡಲಾಗುತ್ತಿದೆ. ಮಾತ್ರವಲ್ಲದೆ ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರ ನೀಡಲಾಗುತ್ತದೆ.
ಈ ಸಂದರ್ಭ ನುರಿತ ತರಬೇತುದಾರರಾದ ಅಕಾಡೆಮಿಯ ಕಾರ್ಯದರ್ಶಿ, ಮಾಜಿ ಸೈನಿಕ ಕೇಟೋಳಿರ ಡಾಲಿ ಅಪ್ಪಚ್ಚ ಹಾಗೂ ಕ್ರೀಡಾಪಟು ಅರೆಯಡ ಗಣೇಶ್ ಬೆಳ್ಳಿಯಪ್ಪ, ಬಿದ್ದಾಟಂಡ ಮಮತಾ ಚಿಣ್ಣಪ್ಪ, ಅಕಾಡೆಮಿ ಖಜಾಂಚಿ ಮಾಚೇಟಿರ ಕುಸು ಕುಶಾಲಪ್ಪ, ಅಕಾಡೆಮಿ ನಿರ್ದೇಶಕರಾದ ಕುಂಚೆಟ್ಟಿರ ಸುಧಿ, ದುಗ್ಗಳ ಸದಾನಂದ, ಪೋಷಕರು ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.