ಪೆರಾಜೆ, ಫೆ. ೨೦: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ವಿ೪ ನ್ಯೂಸ್ ಮತ್ತು ಎಂಬಿ ಫೌಂಡೇಶನ್ನ ಸಹಯೋಗ ದಲ್ಲಿ 'ಅರೆಭಾಷೆ ಕಾಮಿಡಿ' ರಿಯಾಲಿಟಿ ಶೋ ಸುಳ್ಯದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ರಿಯಾಲಿಟಿ ಶೋಗೆ ತಂಡಗಳ ಆಯ್ಕೆಗಾಗಿ ನಡೆದ ಆಡಿಷನ್ ಕಾರ್ಯಕ್ರಮವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಅರೆಭಾಷೆ ಅಕಾಡೆಮಿಯು ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದೀಗ ಅರೆಭಾಷೆ ಕಾಮಿಡಿ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅರೆಭಾಷೆ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ. ಅರೆಭಾಷೆಯ ವಿಸ್ತರಣೆಗೆ ಪೂರಕವಾದ ಕಾರ್ಯಕ್ರಮ. ಅರೆಭಾಷೆ ಎಲ್ಲರಿಗೂ ಮುಟ್ಟುವ ಮತ್ತು ಸರ್ವ ವ್ಯಾಪಿಯಾಗುವ ಕಾರ್ಯಕ್ರಮ ಎಂದು ಹೇಳಿದರು. ದ.ಕ. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ' ಅರೆಭಾಷೆ ಇಂದು ಒಂದು ಜನಾಂಗದ ಭಾಷೆ ಮಾತ್ರವಲ್ಲ ಅದು ಇಡೀ ಸಮುದಾಯದ ಆಡು ಭಾಷೆಯಾಗಿದೆ. ಎಲ್ಲರೂ ಬಹಳ ಸುಂದರವಾಗಿ ಅರ್ಥಪೂರ್ಣವಾಗಿ ಮಾತನಾಡುತ್ತಾರೆ ಎಂದರು.
ವಿ೪ ಚಾನೆಲ್ನ ವ್ಯವಸ್ಥಾಪಕ ನಿರ್ದೇಶಕ ಲಕ್ಷö್ಮಣ್ ಕುಂದರ್, ಪ್ರಾದೇಶಿಕ ಸುದ್ದಿ ಸಂಪಾದಕ ಪುಷ್ಪರಾಜ್ ಶೆಟ್ಟಿ, ಎಂ.ಬಿ. ಫೌಂಡೇಶನ್ನ ಅಧ್ಯಕ್ಷ ಎಂ.ಬಿ. ಸದಾಶಿವ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ವೆಂಕಟರಮಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಸಿ. ಸದಾನಂದ, ಉಪಾಧ್ಯಕ್ಷ ದಿನೇಶ್ ಮಡಪ್ಪಾಡಿ, ಪ್ರಮುಖರಾದ ಎ.ವಿ. ತೀರ್ಥರಾಮ, ಚಂದ್ರ ಕೋಲ್ಚಾರ್, ಎಸ್.ಆರ್. ಸೂರಯ್ಯ, ಭವಾನಿಶಂಕರ ಅಡ್ತಲೆ, ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ರೈ, ಅರೆಭಾಷೆ ಅಕಾಡೆಮಿ ಸದಸ್ಯರಾದ ತೇಜಕುಮಾರ್ ಬಡ್ಡಡ್ಕ, ಚಂದ್ರಶೇಖರ ಪೇರಾಲು, ಡಾ. ಎನ್.ಎ. ಜ್ಞಾನೇಶ್, ಲತಾ ಕುದ್ಪಾಜೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅರೆಭಾಷೆ ಅಕಾಡೆಮಿ ಸದಸ್ಯ ಲೋಕೇಶ್ ಊರುಬೈಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಚಂದ್ರಾವತಿ ಬಡ್ಡಡ್ಕ ವಂದಿಸಿದರು. ಬಳಿಕ ಅರೆಭಾಷೆ ಕಾಮಿಡಿ ಆಡಿಷನ್ ನಡೆಯಿತು.