ಮಡಿಕೇರಿ, ನ. ೨೪: ಕೊಡಗು ವಿಭಾಗೀಯ ಅಂಚೆ ನೌಕರರ ಕ್ರೀಡಾಕೂಟ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಅಂಚೆ ಅಧೀಕ್ಷಕ ಎಸ್.ಪಿ. ರವಿ ಉದ್ಘಾಟಿಸಿದರು.

ನಗರದ ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ೬ ಕ್ರಿಕೆಟ್, ಥ್ರೋಬಾಲ್ ತಂಡಗಳು ಭಾಗವಹಿಸಿದ್ದವು. ಇದರೊಂದಿಗೆ ಹಗ್ಗಜಗ್ಗಾಟ, ಭಾರದ ಗುಂಡು ಎಸೆತ ಸೇರಿದಂತೆ ಇನ್ನಿತರ ಆಟೋಟಗಳು ನಡೆದವು. ೩೦೦ಕ್ಕೂ ಹೆಚ್ಚು ನೌಕರರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಕ್ರೀಡಾಕೂಟದೊಂದಿಗೆ ಅಂಚೆ ನೌಕರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆಗೊಂಡಿತ್ತು. ಕಾರ್ಯಕ್ರಮ ಆಯೋಜಕರಾದ ಬೇಬಿ ಜೋಸೆಫ್, ಟಿ.ಕೆ. ಮಂಜು, ಕೆ.ಎಸ್. ಸಂದೀಪ್ ಅವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಉಪ ಅಂಚೆ ಅಧೀಕ್ಷಕ ಗಜೇಂದ್ರ, ಮಡಿಕೇರಿ ಮುಖ್ಯ ಅಂಚೆಪಾಲಕ ಎಸ್.ವಿ. ಮಂಜುನಾಥ್, ಬೆಂಗಳೂರು ಬಸವನಗುಡಿ ಹಿರಿಯ ಅಂಚೆಪಾಲಕ ಹೆಚ್.ಜೆ. ಸೋಮಯ್ಯ, ಸುಳ್ಯ ಅಂಚೆಕಚೇರಿ ಮುಖ್ಯ ಅಂಚೆಪಾಲಕ ಎಂ.ಕೆ. ಮೋಹನ್, ನಿವೃತ್ತ ಅಂಚೆ ಪಾಲಕ ಬಿ.ಜಿ. ಉಮೇಶ್, ನಿವೃತ್ತ ಸಿಬ್ಬಂದಿ ಎಲ್.ಕೆ. ಹರಿನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.