ಮಡಿಕೇರಿ, ಅ. ೩೧: ಸುಂಟಿಕೊಪ್ಪದ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದಲ್ಲಿ ಜಿಲ್ಲಾಡಳಿತ - ಜಿಲ್ಲಾ ಪಂಚಾಯತ್ - ಕೊಡಗು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ - ಕೊಡಗು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸ್ವಸ್ಥ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಆರೈಕೆದಾರರ ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶುಭ ಅವರು ವಿಶೇಷಚೇತನರು ತಾರತಮ್ಯವಿಲ್ಲದೇ ಬದುಕು ಕಟ್ಟಿಕೊಳ್ಳುವಂತಾಗಬೇಕು. ಅದಕ್ಕೆ ಅವಶ್ಯಕವಾಗಿ ದೊರೆಯುವ ಕಾನೂನಿನ ನೆರವಿನ ಬಗ್ಗೆ ವಿವರಿಸಿ ಕಾನೂನನ್ನು ಸದುಪಯೋಗಪಡಿಸಿ ಕೊಳ್ಳಬೇಕೆಂದು ತಿಳಿಸಿದರು. ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳಾದ ಕೆ.ಜಿ. ವಿಮಲಾ ಅವರು ಕಾರ್ಯಕ್ರಮದ ಆಶಯ ಮತ್ತು ಆರೈಕೆದಾರರ ಬಗ್ಗೆ ವಿಶ್ವ ಸಂಸ್ಥೆಯ ನಿಲುವನ್ನು ವ್ಯಕ್ತಪಡಿಸಿದರು.
ಸೋಮವಾರಪೇಟೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಮುದೋಳ ಅವರು ವಿಶೇಷಚೇತನರ ಪಾಲಕರ ಬವಣೆಗಳು ಮತ್ತು ಅವುಗಳನ್ನು ಮೀರಲು ಮಾರ್ಗಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ವಸ್ಥ ಸಂಸ್ಥೆಯ ನಿರ್ದೇಶಕರಾದ ಆರತಿ ಸೋಮಯ್ಯ ಅವರು ಮಾತನಾಡಿ ವಿಶೇಷಚೇತನ ಯುವಜನರ ಸಬಲೀಕರಣದಲ್ಲಿ ಬರುವ ಅಡೆತಡೆಗಳು, ಸಮಾಜದ ಸ್ಪಂದನ ಮತ್ತು ಜವಾಬ್ದಾರಿ, ಯೋಜನೆಗಳ ಸಾಫಲ್ಯತೆಗಳ ಬಗ್ಗೆ ತಿಳಿಸಿದರು.
ಸುಂಟಿಕೊಪ್ಪದ ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕರಾದ ಗೌತಮ್ ಮೈನಿ ಅವರು ವಿಶೇಷಚೇತನರನ್ನು ಸಮಾಜದ ಮುಖ್ಯವಾಹಿನಿಯೊಂದಿಗೆ ಏಕೀಕರಿಸುವ ಆಶಯ ವ್ಯಕ್ತಪಡಿಸಿದರು.
ಆಟಿಸಂ ಕುರಿತು ಕಾರ್ಯಾಗಾರ
ಮಕ್ಕಳ ಮನಃಶಾಸ್ತಜ್ಞರಾದ ರುಷಾಲಿ ಅವರು ಆಟಿಸಂ - ಸ್ವಲೀನತೆಯ ಆರಂಭಿಕ ಹಂತದಲ್ಲಿ ಗುರುತಿಸುವಿಕೆ ಮತ್ತು ನಿಭಾಯಿಸುವ ಕುರಿತು ಕಾರ್ಯಾಗಾರವನ್ನು ನಡೆಸಿದರು. ಸಾಮಾನ್ಯ ಶಾಲೆಗಳಲ್ಲಿ ಆಟಿಸಂ ಮಕ್ಕಳ ಏಕೀಕೃತ ಶಿಕ್ಷಣದ ಬಗ್ಗೆ ವನಿತಾ ಚೆಂಗಪ್ಪ, ಆಟಿಸಂ ಮಕ್ಕಳ ಜತೆಗಿನ ಅನುಭವಗಳ ಕುರಿತು ಮಂಜುಳಾ, ಫಿಸಿಯೋಥೆರಪಿಯ ಅನುಕೂಲಗಳ ಕುರಿತು ರಮಜೆ ಸಾಬ್ ನದಾಫ್, ವಿಶೇಷಚೇತನ ಮಕ್ಕಳ ದೃಶ್ಯಕಲೆ ಮತ್ತು ಕೌಶಲ್ಯ ತರಬೇತಿಯ ಕುರಿತು ರಾಮ್ ಗೌತಮ್ ಮಾಹಿತಿ ನೀಡಿದರು. ಸ್ವಸ್ಥ ಸಂಸ್ಥೆಯ ವಿದ್ಯಾರ್ಥಿ ಗಳಿಂದ ನೃತ್ಯ ಪ್ರದರ್ಶನಗಳು ಸಭಿಕರನ್ನು ರಂಜಿಸಿತು. ಕಾರ್ಯಾಗಾರದಲ್ಲಿ ವಿಶೇಷಚೇತನ ಮಕ್ಕಳ ಪಾಲಕರು, ಸರ್ಕಾರಿ ಶಾಲಾ ಶಿಕ್ಷಕಿಯರು ಮತ್ತು ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು. ಸ್ವಸ್ಥ ಸಂಸ್ಥೆಯ ವಿಶೇಷ ಶಿಕ್ಷಕರಾದ ಮಂಜುನಾಥ್ ಮತ್ತು ಲಲಿತಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.