ಕುಶಾಲನಗರ, ಆ. ೧೦: ಕರ್ನಾಟಕ ಏಕೀಕರಣದಲ್ಲಿ ಪತ್ರಿಕೆ ಹಾಗೂ ಮಾಧ್ಯಮಗಳ ಪಾತ್ರ ಪ್ರಮುಖವಾಗಿತ್ತು ಎಂದು ನಿವೃತ್ತ ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಹೇಳಿದರು.

ಕನ್ನಡ ಸಿರಿ ಸ್ನೇಹ ಬಳಗ ಮತ್ತು ಕನ್ನಡ ಭಾರತಿ ಪದವಿಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಕುಶಾಲನಗರ ಕನ್ನಡ ಭಾರತಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ಏಕೀಕರಣ ದಲ್ಲಿ ಮಾಧ್ಯಮಗಳ ಪಾತ್ರ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು. ಅಕ್ಷರ ಮತ್ತು ದೃಶ್ಯ ಮಾಧ್ಯಮಗಳು ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಸೇತುವೆ ಯಂತೆ ಕೆಲಸ ನಿರ್ವಹಿಸಿ ಜನರ ಬದುಕು ಹಸನಾಗಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಮೆಚ್ಚುಗೆಯ ವಿಷಯ ಎಂದರು.

ಆರಂಭದಲ್ಲಿ ಧರ್ಮ ಪ್ರಚಾರಕ್ಕಾಗಿ ಪ್ರಾರಂಭಗೊAಡ ಪತ್ರಿಕೆಗಳು ಇದೀಗ ಸ್ಥಳೀಯ ಜನರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಸರಕಾರಗಳ ಮೂಲಕ ಪರಿಹಾರ ಕಂಡುಹಿಡಿಯುವಲ್ಲಿ ಯಶಸ್ವಿ ಆಗುತ್ತಿದೆ. ಪತ್ರಿಕೆಗಳ ಮೂಲಕ ಬರಹಗಾರರ ಸೃಷ್ಟಿ ಸಾಧ್ಯವಾಗಿದೆ ಎಂದ ಅವರು, ಪತ್ರಿಕಾ ರಂಗ ಪ್ರಜಾಪ್ರಭುತ್ವದ ಕಾವಲುಗಾರನಾಗಿ ಕೆಲಸ ಮಾಡಬೇಕು. ಪ್ರಜಾ ಪ್ರತಿನಿಧಿಗಳು ದಾರಿ ತಪ್ಪಿದ ಸಂದರ್ಭ ಎಚ್ಚರಿಕೆ ಗಂಟೆಯನ್ನು ನೀಡುವಂತಾಗ ಬೇಕು ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆಎಸಿ ವಲಯ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ಇತಿಹಾಸ ತಿಳಿಯದೆ ಸಾಧನೆ ಅಸಾಧ್ಯ. ಸಮಾಜದ ಆಗು ಹೋಗುಗಳ ಬಗ್ಗೆ ದಿನನಿತ್ಯ ವರದಿ ಮಾಡುವ ಪತ್ರಕರ್ತರ ಕೆಲಸ ಕಾರ್ಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಮಾಧ್ಯಮ ಮತ್ತು ಇಂದಿನ ವಿದ್ಯಾರ್ಥಿಗಳು ವಿಷಯದ ಮೇಲೆ ವಿಷಯ ಮಂಡನೆ ಮಾಡಿದ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಪತ್ರಿಕೆಗಳು ಮಾರಾಟವಾಗಬೇಕೆ ಹೊರತು ಯಾವುದೇ ಸಂದರ್ಭದಲ್ಲಿ ಸುದ್ದಿಗಳನ್ನು ಅಥವಾ ಪತ್ರಕರ್ತ ತಾನು ಮಾರಾಟವಾಗದಂತೆ ಎಚ್ಚರಿಕೆ ವಹಿಸುವ ಕಾಲಬಂದಿದೆ. ವಸ್ತುನಿಷ್ಠ ಸುದ್ದಿಗಳು ನಿರಂತರವಾಗಿ ಪ್ರಕಟ ವಾಗುವಂತೆ ಪ್ರತಿಯೊಬ್ಬ ಪತ್ರಕರ್ತ ಆಸಕ್ತಿ ವಹಿಸಿ ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಪಾತ್ರ ವಹಿಸಬೇಕು ಎಂದರು. ವಿದ್ಯಾರ್ಥಿಗಳು ಪತ್ರಿP ೆಗಳನ್ನು ಓದುವ ಹವ್ಯಾಸ ರೂಢಿಸಿ ಕೊಳ್ಳಬೇಕು ಎಂದು ಕರೆ ನೀಡಿದರು.

ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಬಳಗದ ವತಿಯಿಂದ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಈಗಾಗಲೇ ೨೯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಏಕೀಕರಣದ ಬಗ್ಗೆ ಹಾಗೂ ಮಾಧ್ಯಮಗಳ ಪಾತ್ರದ ವಿಷಯದ ಕುರಿತಾಗಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದರು. ಕನ್ನಡ ಭಾರತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ನಾಗೇಂದ್ರ ಸ್ವಾಮಿ ಅವರ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಎಸ್. ರುದ್ರಪ್ಪ ವಿಶೇಷ ಆಹ್ವಾನಿತರಾಗಿ, ಕುಶಾಲ ನಗರ ಪ್ರೆಸ್ ಕ್ಲಬ್ ಅಧ್ಯಕ್ಷ ಹೆಚ್.ಎಂ. ರಘು ಮತ್ತು ಕೊಡಗು ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ವಿಘ್ನೇಶ್ ಭೂತಾನಕಾಡು ಅವರುಗಳು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರುಗಳಾದ ಎಂ.ಎನ್. ಚಂದ್ರಮೋಹನ್, ಹೆಚ್.ಎಂ. ರಘು ಮತ್ತು ವಿಘ್ನೇಶ್ ಭೂತನಕಾಡು ಅವರುಗಳನ್ನು ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿನಿ ತನ್ಸೀರಾ ಪ್ರಾರ್ಥಿಸಿದರು. ಉಪನ್ಯಾಸಕ ರಾದ ಮಂಜುನಾಥ್ ಸ್ವಾಗತಿಸಿ, ಹೆಚ್.ಎಸ್. ಅನಿತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.