ಸೋಮವಾರಪೇಟೆ, ಮೇ ೩ : ಶಾಂತಳ್ಳಿ ಹೋಬಳಿಯ ಬೆಟ್ಟದಕೊಪ್ಪ ಮತ್ತು ಕಾಕನಕೊಪ್ಪಲು ಗ್ರಾಮದಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು ಕೃಷಿಕರು ಭಯಭೀತರಾಗಿದ್ದಾರೆ. ಕಾಜೂರು ಮೀಸಲು ಅರಣ್ಯದಿಂದ ೯ ಕಾಡಾನೆಗಳು ಬೆಟ್ಟದಕೊಪ್ಪ ದೇವರಕಾಡಿನಲ್ಲಿ ಉಳಿದುಕೊಂಡಿವೆ. ಮೀಸಲು ಅರಣ್ಯದಲ್ಲಿ ಆಹಾರ, ನೀರಿನ ಕೊರತೆಯಿಂದ ಕಾಡಾನೆಗಳು ಗ್ರಾಮದ ಕಡೆಗೆ ಬಂದಿವೆ ಎನ್ನಲಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಾನೆಗಳನ್ನು ಅರಣ್ಯಕ್ಕಟ್ಟಲು ಹರಸಾಹಸ ಪಡುತ್ತಿದ್ದಾರೆ. ಶುಕ್ರವಾರದಂದು ಕಾರ್ಯಾಚರಣೆ ಮುಂದುವರಿಸಲಾಗಿತ್ತು ಎಂದು ಡಿಆರ್‌ಎಫ್‌ಒ ಸತೀಶ್ ಕುಮಾರ್ ತಿಳಿಸಿದ್ದಾರೆ.