ಕಣಿವೆ, ಏ. ೨೧: ಸಮಾಜದ ಉದ್ಧಾರಕ್ಕೆ ಎಲ್ಲರೂ ಸೇರಿ ದೀಪ ಹಚ್ಚಬೇಕೇ ಹೊರತು ಬೆಂಕಿ ಹಚ್ಚಬಾರದು ಎಂದು ಹೈಕೋರ್ಟ್ ವಕೀಲರೂ ಆಗಿರುವ ಕಾಂಗ್ರೆಸ್ ಧುರೀಣ ಹೆಚ್.ಎಸ್. ಚಂದ್ರಮೌಳಿ ಹೇಳಿದರು.

ಕೊಡ್ಲಿಪೇಟೆಯ ಕಿರಿಕೊಡ್ಲಿ ವಿದ್ಯಾಪೀಠದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೊಡಗು ಜಿಲ್ಲಾ ವೀರಶೈವ ಸಮಾಜದ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ೩೦ ಸಾವಿರದಷ್ಟು ವೀರಶೈವ ಲಿಂಗಾಯಿತರು ಇದ್ದರೂ ಕೂಡ ಇದುವರೆಗೂ ಸಾಮಾಜಿಕವಾಗಿ ಏಕೆ ಒಗ್ಗೂಡಿಲ್ಲ, ಜಿಲ್ಲೆಯಲ್ಲಿ ಅಥವಾ ಯಾವುದಾದರೂ ಒಂದು ತಾಲೂಕಿನಲ್ಲಿ ವೀರಶೈವ ಜನಾಂಗದ ಒಂದೇ ಒಂದು ಸಮುದಾಯ ಭವನವಿಲ್ಲ. ಲಿಂಗಾಯಿತರು ಪರಸ್ಪರ ಅಸೂಯೆ, ಹೊಟ್ಟೆಕಿಚ್ಚು, ಕಾಲೆಳೆಯುವು ದನ್ನು ಬಿಟ್ಟು ಒಂದಾದರೆ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಚಂದ್ರಮೌಳಿ ಆಶಿಸಿದರು. ಕೊಡಗು ಜಿಲ್ಲೆಯಲ್ಲಿ ಜಾತ್ಯತೀತ ಮನೋಭಾವದ ಇಬ್ಬರು ಶಾಸಕರು ಇದ್ದಾರೆ. ಆದ್ದರಿಂದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಅವರ ಸಹಕಾರ ಪಡೆದುಕೊಂಡು ಜಿಲ್ಲೆಯಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಬೇಕೆಂದು ಅವರು ಇದೇ ಸಂದರ್ಭ ಹೇಳಿದರು.

ಹುಬ್ಬಳ್ಳಿಯಲ್ಲಿ ಈಚೆಗೆ ನಡೆದ ಲಿಂಗಾಯಿತ ಸಮುದಾಯದ ನೇಹಾ ಕಗ್ಗೊಲೆಯನ್ನು ತೀವ್ರವಾಗಿ ಖಂಡಿಸಿದ ಚಂದ್ರಮೌಳಿ, ಯುವತಿ ನೇಹಾ ಕೊಲೆಗೈದ ಆರೋಪಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿದರು. ಇದೇ ಸಂದರ್ಭ ನೇಹಾ ಆತ್ಮಕ್ಕೆ ಸಭೆ ಸಂತಾಪ ಸೂಚಿಸಿತು.

ಸಭೆಗೆ ಅನಿರೀಕ್ಷಿತವಾಗಿ ಆಗಮಿಸಿದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಮಡಿಕೇರಿ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ತನ್ನ ಗೆಲುವಿಗೆ ಲಿಂಗಾಯಿತರ ಮತಗಳು ನಿರ್ಣಾಯಕವಾಗಿದ್ದವು. ಹಾಗಾಗಿ ಸಮಾಜದ ಯಾವುದೇ ನೆರವಿಗೆ ನಾನು ಸದಾ ಬದ್ಧ. ಚುನಾವಣೆ ಸಮಯದಲ್ಲಿ ಮಾತ್ರ ರಾಜಕೀಯ ಹೊರತು, ಚುನಾವಣೆ ನಂತರ ನನಗೆ ಎಲ್ಲರೂ ಒಂದೇ. ಹೈಕೋರ್ಟ್ ವಕೀಲರೂ ಆಗಿರುವ ಕಾಂಗ್ರೆಸ್ ಮುಖಂಡರಾದ ಚಂದ್ರಮೌಳಿ ಅವರ ರಾಜಕೀಯ ಹಾಗೂ ಅಧಿಕಾರದ ಸಾಮರ್ಥ್ಯ ಕೊಡಗಿನ ವೀರಶೈವ ಸಮಾಜದವರಿಗೆ ಅರಿವಿದ್ದಂತಿಲ್ಲ. ಇಂತಹ ನಾಯಕನನ್ನು ಬಳಸಿಕೊಂಡು ಸಮಾಜವನ್ನು ಶಕ್ತಿಯುತವಾಗಿ ಕಟ್ಟುವ ಮೂಲಕ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಕೈಜೋಡಿಸಿ ಎಂದು ಶಾಸಕ ಮಂತರ್‌ಗೌಡ ಮನವಿ ಮಾಡಿದರು.

ಸಭೆಯ ಸಾನಿಧ್ಯ ವಹಿಸಿದ್ದ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಕೊಡಗಿನಲ್ಲಿ ಲಿಂಗಾಯಿತ ಸಮಾಜ ಒಗ್ಗೂಡುವ ಮೂಲಕ ಬಲಗೊಳ್ಳಬೇಕಿದೆ. ಸಮಾಜ ಶಕ್ತಿಶಾಲಿಯಾಗಿದ್ದಲ್ಲಿ ಮಾತ್ರ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದರು.

ಮುದ್ದಿನಕಟ್ಟೆ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮನೇಹಳ್ಳಿ ಮಠದ ಶ್ರೀ ಮಹಾಂತ ಸ್ವಾಮೀಜಿ, ಕಲ್ಲಹಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಕೊಡಗು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಕಾರ್ಯದರ್ಶಿ ಜಿ.ಎಂ. ಕಾಂತರಾಜು, ಸೋಮವಾರ ಪೇಟೆ ತಾಲೂಕು ಅಧ್ಯಕ್ಷ ಹಾಲಪ್ಪ, ಹಿರಿಯರಾದ ಕೊಡ್ಲಿಪೇಟೆ ವಸಂತ್, ಸಂಪಿಗೆದಾಳು ವೀರಪ್ಪ, ಕುಶಾಲನಗರದ ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಭುಲಿAಗಪ್ಪ, ಕುಶಾಲನಗರ ವೀರಶೈವ ಸಮಾಜದ ಅಧ್ಯಕ್ಷ ಎಂ.ಎಸ್.ಶಿವಾನAದ ಮತ್ತಿತರರು ಇದ್ದರು.

ಇದೇ ವೇಳೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಆಯ್ಕೆಯಾದ ಶನಿವಾರಸಂತೆಯ ಶರತ್ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.