ಕಣಿವೆ, ಮಾ. ೨೭: ಕುಶಾಲನಗರ-ಹಾಸನ ರಾಜ್ಯ ಹೆದ್ದಾರಿಯ ಹೆಬ್ಬಾಲೆ ಬಳಿ ಕುರಿ, ಕೋಳಿ ಮಾಂಸದ ಮಳಿಗೆಗಳ ತ್ಯಾಜ್ಯವನ್ನು ಚೀಲಗಳಲ್ಲಿ ತುಂಬಿಸಿ ತಂದು ಸುರಿಯಲಾಗಿದೆ. ಇದು ಹೆದ್ದಾರಿ ಹೋಕರ ಮೂಗನ್ನು ಮುಚ್ಚಿಸುತ್ತಿದೆ.

ಈ ಬಗ್ಗೆ ಸ್ಥಳೀಯ ಹೆಬ್ಬಾಲೆ ಗ್ರಾಮ ಪಂಚಾಯಿತಿ ಯಾವುದೇ ಕ್ರಮ ಕೈಗೊಳ್ಳದೇ ಮೌನವಹಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಜನ, ಜಾನುವಾರುಗಳಿಗೆ ಹಾಗೂ ವನ್ಯ ಪ್ರಾಣಿಗಳಿಗೆ ಮಾರಕವಾಗಿರುವ ಈ ಕಸದ ರಾಶಿಯನ್ನು ಕೂಡಲೇ ತೆರವುಗೊಳಿಸಬೇಕು. ಜೊತೆಗೆ ಕಸ ಸುರಿದಿರುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಸ್ಥಳೀಯ ಶುಂಠಿ ಕೃಷಿಕರೂ ಆದ ಕಾಂಗ್ರೆಸ್ ಮುಖಂಡ ಹೆಬ್ಬಾಲೆ ರಾಜಶೇಖರ್ ಹಾಗೂ ರೈತ ಮುಖಂಡ ಶರತ್ ಒತ್ತಾಯಿಸಿದ್ದಾರೆ.