ಕುಶಾಲನಗರ, ಫೆ. ೨೮: ನೀರಾವರಿ ಯೋಜನೆಗಳ ಮೂಲಕ ಮಾತ್ರ ರೈತರ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರ ಪುತ್ರ ಹಾಗೂ ಮಾಜಿ ಶಾಸಕ ಕೈಲಾಸ್ ನಾಥ್ ವಿ ಪಾಟೀಲ್ ಹೇಳಿದರು.

ಕುಶಾಲನಗರದ ಸಮೀಪ ಹಾರಂಗಿ ಅಣೆಕಟ್ಟು ಆವರಣದಲ್ಲಿ ಕನ್ನಡ ಸಿರಿ ಸ್ನೇಹ ಬಳಗದ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಕೃಷಿ ಅಭಿವೃದ್ಧಿ ಗಾಗಿ ಹಾರಂಗಿ ಜಲಾಶಯದ ನಿರ್ಮಾಣಕ್ಕೆ ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೈತಾಪಿ ವರ್ಗ ಆರ್ಥಿಕವಾಗಿ ಸದೃಢರಾಗಬೇಕಾದಲ್ಲಿ ಅವರಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕಾಗುತ್ತದೆ. ಅಣೆಕಟ್ಟು ನಿರ್ಮಾಣ ಸಂದರ್ಭ ಮುಳುಗಡೆಯಾದ ಜಮೀನಿನ ರೈತರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಕಲ್ಪಿಸಬೇಕಾಗಿದೆ. ರಾಜ್ಯದಲ್ಲಿ ಜಲಾಶಯ ಅಣೆಕಟ್ಟುಗಳ ನಿರ್ಮಾಣ ಸಂದರ್ಭ ಭೂಮಿ ಕಳೆದುಕೊಂಡ ರೈತರ ಬಗ್ಗೆ ಸರ್ಕಾರ ವಿಶೇಷ ಕಾಳಜಿ ವಹಿಸುವುದು ಅಗತ್ಯ ಎಂದರು. ಈ ಬಗ್ಗೆ ಹಾಲಿ ಮತ್ತು ಮಾಜಿ ಶಾಸಕರು ಸರ್ಕಾರದ ಗಮನ ಸೆಳೆಯಬೇಕಾಗಿದೆ ಎಂದರು.

ಮಾಜಿ ಶಾಸಕ ಹೆಚ್.ಸಿ. ಬಸವರಾಜ್ ಮಾತನಾಡಿ ಯುವ ಪೀಳಿಗೆ ಇತಿಹಾಸದ ಬಗ್ಗೆ ಗಮನಹರಿ ಸಬೇಕಾಗಿದೆ. ತ್ಯಾಗ ಬಲಿದಾನ ಮೂಲಕ ಸಾಮಾಜಿಕ ಕೆಲಸಗಳನ್ನು ನಿರ್ವಹಿಸಿದ ಚೇತನಗಳ ಬಗ್ಗೆ ಸ್ಮರಿಸುವುದು ಅಗತ್ಯವಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರ ಜನ್ಮದಿನೋತ್ಸವ ಲಾಂಛನ ಬಿಡುಗಡೆ ಮಾಡಿದ ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಪ್ರತಿಯೊಬ್ಬರೂ ಪ್ರಕೃತಿ ಬಗ್ಗೆ ಕಾಳಜಿ ವಹಿಸಬೇಕು. ರೈತಾಪಿ ವರ್ಗಕ್ಕೆ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಿದಲ್ಲಿ ರಾಜ್ಯ, ರಾಷ್ಟçದ ಬೆಳವಣಿಗೆ ಸಾಧ್ಯ.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್ ನಾಡು ನುಡಿ ನೆಲ ಜಲ ಸಂರಕ್ಷಣೆಗೆ ಹೋರಾಟ ಮಾಡಿದ ಗಣ್ಯರ ಸ್ಮರಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.

ಹಾರAಗಿ ನೀರು ಬಳಕೆದಾರರ ಮಹಾಮಂಡಲದ ಅಧ್ಯಕ್ಷರಾದ ಚೌಡೇಗೌಡ, ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ ನಾಯಕ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಮಾಜಿ ಶಾಸಕರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಹಾರಂಗಿ ಯೋಜನಾ ವೃತ್ತದ ಕಾರ್ಯಪಾಲಕ ಅಭಿಯಂತರ ದೇವೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಮಣಿಕಂಠ, ಕಾಂಗ್ರೆಸ್ ಪ್ರಮುಖರಾದ ಕೆ.ಪಿ. ಚಂದ್ರಕಲಾ, ವಿ.ಪಿ. ಶಶಿಧರ್, ಪಾಟೀಲ್ ಮೊಮ್ಮಗಳಾದ ಶೀಲಾ ಸಂಜಯ್, ಶೈಲಾ ಅಪ್ಪಚ್ಚುರಂಜನ್, ಬೆಳೆಗಾರರಾದ ಎಸ್.ಬಿ. ಜಯರಾಜ್, ಬಳಗದ ಪ್ರಮುಖರು ನೀರು ಬಳಕೆದಾರರ ಸದಸ್ಯರು ಇದ್ದರು.

ಕುಡೆಕಲ್ ಗಣೇಶ್ ಪ್ರಾರ್ಥಿಸಿ, ಸಿರಿ ಬಳಗದ ಪ್ರಮುಖ ಪಾಂಡುರAಗ ಸ್ವಾಗತಿಸಿ, ಉಪನ್ಯಾಸಕ ಹಂಡ್ರAಗಿ ನಾಗರಾಜ್ ನಿರೂಪಿಸಿದರು.