ಕುಶಾಲನಗರ, ಫೆ. ೨೭: ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನಡೆಯುವ ವಾರದ ಸಂತೆಯನ್ನು ಸ್ಥಳಾಂತರ ಮಾಡದಂತೆ ಆಗ್ರಹಿಸಿ ಸಂತೆ ವ್ಯಾಪಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಕಳೆದ ಎರಡು ವರ್ಷಗಳಿಂದ ವಾರದ ಸಂತೆ ಕುಶಾಲನಗರ ಪಟ್ಟಣದ ಮೈಸೂರು ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಸುಸೂತ್ರವಾಗಿ ನಡೆಯುತ್ತಿದ್ದು ಇದನ್ನು ಮತ್ತೆ ಕೆಇಬಿ ಕಚೇರಿ ಮುಂಭಾಗ ಇರುವ ಹಳೆ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಲು ಕೆಲವು ಪುರಸಭೆ ಸದಸ್ಯರೊಂದಿಗೆ ಸೇರಿ ಕೆಲವರು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ಆರ್ ಎಂ ಸಿ ಆವರಣ ವಿದ್ಯುತ್ ವ್ಯವಸ್ಥೆ ಶೌಚಾಲಯ ಮತ್ತು ಆವರಣ ಗೋಡೆ ಜೊತೆಗೆ ಮೂಲಭೂತ ಸೌಲಭ್ಯ ಹೊಂದಿದ್ದು, ಕುಶಾಲನಗರ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ರೈತರು ತರಕಾರಿ ಮತ್ತು ಇತರ ವಸ್ತುಗಳನ್ನು ತಂದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಇದರಿಂದ ರೈತರಿಗೂ ವ್ಯಾಪಾರಸ್ಥರಿಗೂ ಗ್ರಾಹಕರಿಗೂ ತುಂಬಾ ಅನುಕೂಲವಾಗಿದೆ ಎಂದು ಆರ್ಎಂಸಿ ಸಂತೆ ವ್ಯಾಪಾರಿಗಳು ಮತ್ತು ವರ್ತಕರ ಸೇವಾ ಟ್ರಸ್ಟ್ನ ಅಧ್ಯಕ್ಷ ಡಿ.ಎಸ್. ಮಹೇಶ್ ತಿಳಿಸಿದರು.
ಕೆಲವು ಮಧ್ಯವರ್ತಿಗಳು ಇದನ್ನು ಸಹಿಸದೆ ಮತ್ತೆ ಹಳೆಯ ಮಾರುಕಟ್ಟೆಗೆ ವಾರದ ಸಂತೆ ಸ್ಥಳಾಂತರಿಸುವ ಹುನ್ನಾರ ನಡೆಯುತ್ತಿದ್ದು ಹಳೆ ಮಾರುಕಟ್ಟೆ ಆವರಣದಲ್ಲಿ ಅಪಾಯಕಾರಿ ವಿದ್ಯುತ್ ತಂತಿಗಳು ಹಾದು ಹೋಗಿದ್ದು ಜೊತೆಗೆ ಯಾವುದೇ ಮೂಲಭೂತ ಸೌಲಭ್ಯ ಇಲ್ಲ. ಈ ಹಿಂದೆ ಮಳೆಗಾಲದ ಅವಧಿಯಲ್ಲಿ ವಿದ್ಯುತ್ ತಗಲಿ ಜಾನುವಾರುಗಳು ಪ್ರಾಣ ಕಳೆದುಕೊಂಡಿರುವ ಪ್ರಕರಣಗಳು ನಡೆದಿದೆ ಎಂದು ಅವರು ಹೇಳಿದರು.
ಅಪಾಯಕಾರಿ ಸ್ಥಳದಲ್ಲಿ ಸಂತೆ ಮಾರುಕಟ್ಟೆ ನಡೆಸಲು ಅವಕಾಶ ಕಲ್ಪಿಸಬಾರದು ಎಂದು ಸಂಬAಧಿಸಿದ ಅಧಿಕಾರಿಗಳನ್ನು ಆಗ್ರಹಿಸಿರುವ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಗೋವಿಂದ ಶೆಟ್ಟಿ ಆರ್ ಎಂ ಸಿ ಮಾರುಕಟ್ಟೆ ಆವರಣದಿಂದ ವಾರದ ಸಂತೆಯನ್ನು ಸ್ಥಳಾಂತರ ಗೊಳಿಸಬಾರದು ಎಂದರು.
ಇದೇ ಸಂದರ್ಭ ಕುಶಾಲನಗರಕ್ಕೆ ಭೇಟಿ ನೀಡಿದ್ದ ಉಪ ವಿಭಾಗಾಧಿಕಾರಿ ಹಾಗೂ ಕುಶಾಲನಗರ ಪುರಸಭೆ ಆಡಳಿತಾಧಿಕಾರಿ ವಿನಾಯಕ ನಾರ್ವಡೆ ಅವರಿಗೆ ವ್ಯಾಪಾರಿಗಳು ಮನವಿ ಸಲ್ಲಿಸಿದರು.
ಈ ಬಗ್ಗೆ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ವಿನಾಯಕ ನರ್ವಾಡೆ ಭರವಸೆ ನೀಡಿದರು. ಪ್ರತಿಭಟನೆ ಸಂದರ್ಭ ಉಪಾಧ್ಯಕ್ಷರಾದ ಅನಿಲ್, ಸಹಕಾರದ ಶ್ರೀ ದೇವರಾಜ್, ಸಂಘದ ನಿರ್ದೇಶಕರುಗಳು ಹಾಗೂ ಆರ್ಎಂಸಿ ಮಾಜಿ ಅಧ್ಯಕ್ಷರಾದ ಎಂ.ಡಿ. ರಮೇಶ್, ಮಾಜಿ ನಿರ್ದೇಶಕರಾದ ಕೆ.ಸಿ. ಶಶಿ ಭೀಮಯ್ಯ ಮತ್ತಿತರರು ಇದ್ದರು.