(ಕೆ.ಎಂ. ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಫೆ. ೨೧: ಮಲೆನಾಡಿನ ಜಿಲ್ಲೆಗಳ ಮಾದರಿಯಲ್ಲಿಯೇ ಕೊಡಗು ಜಿಲ್ಲೆಯಲ್ಲಿ ಕೂಡ ೧೮ ಸಾವಿರದಿಂದ ೨೫ ಸಾವಿರ ಗ್ರಾಮೀಣ ಜನಸಂಖ್ಯೆಗೆ ಒಂದು ಜಿಲ್ಲಾ ಪಂಚಾಯಿತಿ ಸ್ಥಾನ ಸೃಷ್ಟಿಸುವ ಸಲುವಾಗಿ ಮಂಡಿಸಿದ್ದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಒಪ್ಪಿಗೆ ನೀಡಿದೆ. ೨೦೧೬ ರಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕೊಡಗು ಜಿಲ್ಲೆಯಲ್ಲಿದ್ದ ೨೯ ಜಿಲ್ಲಾ ಪಂಚಾಯಿತಿ ಸ್ಥಾನಗಳು ಮತ್ತೆ ಮರು ಸ್ಥಾಪನೆಯಾಗಲಿವೆ ಹಾಗೂ ಒಂದೆರೆಡು ಜಿಲ್ಲಾ ಪಂಚಾಯಿತಿ ಸ್ಥಾನಗಳು ಹೆಚ್ಚಳವಾಗುವ ಸಾಧ್ಯತೆಗಳಿವೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರು ಕೊಡಗು ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಸ್ಥಾನಗಳನ್ನು ೨೯ ರಿಂದ ೨೫ಕ್ಕೆ ಸೀಮಾ ಗಡಿ ನಿರ್ಣಯ ಆಯೋಗ ಕಡಿತಗೊಳಿಸಿರುವುದರ ಬಗ್ಗೆ ಗಮನ ಸೆಳೆದಿದ್ದರು. ಚಳಿಗಾಲದ ಅಧಿವೇಶನದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಪೂರವಕಾಗಿ ಸ್ಪಂದಿಸಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ತಿದ್ದುಪಡಿ ವಿದೇಯಕಕ್ಕೆ ತಿದ್ದುಪಡಿ ತರಬೇಕಾಗಿದೆ. ಎಲ್ಲರೂ ಸಹಕಾರ ನೀಡಿದರೆ ವಿಧೇಯಕಕ್ಕೆ ತಿದ್ದುಪಡಿ ತರಲಾಗುವುದೆಂದು ಸದನದಲ್ಲಿ ಉತ್ತರ ನೀಡಿದ್ದರು.
ಇದೀಗ ವಿಧಾನಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಧೇಯಕವನ್ನು ಮಂಡಿಸಿದ್ದು, ವಿಧೇಯಕಕ್ಕೆ ಒಪ್ಪಿಗೆ ದೊರೆತಿದೆ.
ಕೊಡಗು ಜಿಲ್ಲೆಯ ಶಾಸಕದ್ವಯರ ಪ್ರಯತ್ನದಿಂದ ಜಿಲ್ಲೆಯಲ್ಲಿ ಮತ್ತೆ ಜಿಲ್ಲಾ ಪಂಚಾಯಿತಿ ಸ್ಥಾನಗಳು ೨೯ಕ್ಕೇ ಏರಿಕೆ ಕಾಣಲಿವೆ.
ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ೧೯೯೩ ರ ಅಧಿನಿಯಮ ೧೬೦,೧೬೧ ಮತ್ತು ೧೬೨ ರಲ್ಲಿ ಸ್ಪಷ್ಟವಾಗಿ ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ೩೦ ಸಾವಿರ ಜನಸಂಖ್ಯೆ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರ ಹಾಗೂ ಕೊಡಗು ಜಿಲ್ಲೆಗೆ ೧೮ ಸಾವಿರ ಜನಸಂಖ್ಯೆ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರ ಎಂದು ನಿಗದಿ ಮಾಡಲಾಗಿತ್ತು. ಜನಸಂಖ್ಯೆ ನೆಪದಲ್ಲಿ ಪ್ರತ್ಯೇಕ ಲೋಕಸಭಾ ಕ್ಷೇತ್ರದಿಂದ ಕೊಡಗು ಜಿಲ್ಲೆ ವಂಚಿತಗೊAಡಿದೆ.
ಮೂರು ಸ್ಥಾನವಿದ್ದ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಎರಡಕ್ಕಿಳಿದೆ. ನಂತರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪುನರ್ರ್ವಿಂಗಡಣೆಯಲ್ಲಿ ಕೂಡ ಕೊಡಗಿಗೆ ಅನ್ಯಾಯವಾಗಿತ್ತು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚಿಸಲಾಗಿದ್ದ ಪಂಚಾಯತ್ ರಾಜ್ ಸೀಮಾ ಗಡಿ ನಿರ್ಣಯ ಆಯೋಗವು ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಈ ಹಿಂದೆ ನಿಗದಿಪಡಿಸಲಾಗಿದ್ದ ೩೦ ಸಾವಿರ ಜನಸಂಖ್ಯೆಗೆ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸಂಖ್ಯೆಯನ್ನು ೨೩ ಸಾವಿರಕ್ಕೆ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರ ಎಂದು ನಿಗದಿಪಡಿಸ ಲಾಗಿತ್ತು.
ಆದರೆ ೧೮ ಸಾವಿರ ಜನ ಸಂಖ್ಯೆಗೆ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರ ಎಂದು ನಿಗದಿಪಡಿಸಿದ್ದ ಕೊಡಗಿನಲ್ಲಿ ೨೩ ಸಾವಿರ ಜನಸಂಖ್ಯೆ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರ ಎಂದು, ೨೯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿದ್ದ ಕೊಡಗಿನಲ್ಲಿ ೨೫ಕ್ಕೆ ಇಳಿಸಲಾಗಿತ್ತು.
ಸೀಮಾ ಗಡಿ ನಿರ್ಣಯ ಆಯೋಗದ ನಿರ್ಣಯವನ್ನು ಇದೀಗ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ತಿದ್ದುಪಡಿ ವಿಧೇಯಕಕ್ಕೆ ತಿದ್ದುಪಡಿ ತರುವ ಮೂಲಕ ಕೊಡಗಿನ ಶಾಸಕದ್ವಯರ ಪ್ರಯತ್ನದಿಂದ ಜಿಲ್ಲೆಯ ಜನತೆಗೆ ನ್ಯಾಯ ದೊರೆತಿದೆ.
ಕ್ಷೇತ್ರದ ಗಡಿ, ಸಂಖ್ಯೆ ಸದ್ಯದಲ್ಲೇ ಪ್ರಕಟಗೊಳ್ಳುವ ನಿರೀಕ್ಷೆ
ಕೊಡಗು ಜಿಲ್ಲೆ ಹೊರತುಪಡಿಸಿ ೨೦೨೩ ಡಿಸೆಂಬರ್ ೧೯ ರಂದು ರಾಜ್ಯದ ೩೦ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಮತ್ತು ೨೩೪ ತಾಲೂಕು ಪಂಚಾಯಿತಿಗಳ ಸದಸ್ಯರ ಸಂಖ್ಯೆ, ವರ್ಗವಾರು ಮೀಸಲು ಸಂಖ್ಯೆ ಹಾಗೂ ಕ್ಷೇತ್ರಗಳ ಗಡಿಯನ್ನು ನಿಗದಿಪಡಿಸಿ ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿತ್ತು. ಒಂದು ವಾರದೊಳಗೆ ಕೊಡಗು ಜಿಲ್ಲೆಯ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ವಿಂಗಡಣೆಯ ಅಧಿಸೂಚನೆ ಪ್ರಕಟಿಸಿ, ಇದಾದ ನಂತರ ೭ ದಿನಗಳಲ್ಲಿ ಮೀಸಲಾತಿ ಕರಡು ಅಧಿಸೂಚನೆ ಹೊರಡಿಸಿ, ೧೦ ದಿನಗಳ ಕಾಲ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ರಾಜ್ಯದ ಜನರಲ್ ಅಡ್ವಕೇಟ್ ಶಶಿಕಿರಣ್ ಶೆಟ್ಟಿ ಹೈಕೋರ್ಟ್ಗೆ ಮಂಗಳವಾರ ಮಾಹಿತಿ ನೀಡಿದ್ದರು. ಆದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ತಿದ್ದುಪಡಿ
(ಮೊದಲ ಪುಟದಿಂದ) ವಿದೇಯಕಕ್ಕೆ ತಿದ್ದುಪಡಿ ತರಬೇಕಾಗಿರುವುದರಿಂದ ಕೊಡಗು ಜಿಲ್ಲೆಯ ಕ್ಷೇತ್ರದ ಗಡಿ ಹಾಗೂ ಒಟ್ಟು ಮೀಸಲು ಪ್ರಕಟಗೊಂಡಿರಲಿಲ್ಲ.
ಇದೀಗ ವಿಧೇಯಕಕ್ಕೆ ತಿದ್ದುಪಡಿ ತರಲಾಗಿದ್ದು, ಸದ್ಯದಲ್ಲೇ ಕೊಡಗು ಜಿಲ್ಲೆಯ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಕ್ಷೇತ್ರಗಳ ಗಡಿ, ಸಂಖ್ಯೆ, ಮೀಸಲು ಪ್ರಕಟಗೊಳ್ಳಲಿದೆ. ಈಗಾಗಲೇ ರಾಜ್ಯದ ೩೦ ಜಿಲ್ಲೆಗಳ ಕ್ಷೇತ್ರದ ಗಡಿ, ಸಂಖ್ಯೆ, ಮೀಸಲು ಪ್ರಕಟಗೊಂಡಿದೆ.
ಲೋಕಸಭಾ ಚುನಾವಣೆಯ ಬಳಿಕ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ.
ಬಿಜೆಪಿ ಸರ್ಕಾರ ಅವಧಿಯಲ್ಲಿ ೨೦೨೩ ಜನವರಿ ತಿಂಗಳಲ್ಲಿ ಸೀಮಾ ನಿರ್ಣಯ ಆಯೋಗದಿಂದ ಕ್ಷೇತ್ರಗಳ ಪುನರ್ವಿಂಗಡಣೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ೨೦೨೩ ಜನವರಿ ತಿಂಗಳಲ್ಲಿ ಪ್ರಕಟಗೊಂಡಿದ್ದ ಕ್ಷೇತ್ರಗಳ ಪುನರ್ವಿಂಗಡಣೆಗೆ ದೊಡ್ಡ ಆಕ್ಷೇಪ ಕೂಡ ವ್ಯಕ್ತವಾಗಿತ್ತು. ನಿವೃತ್ತ ಐಎಎಸ್ ಅಧಿಕಾರಿ ಎಂ. ಲಕ್ಷಿö್ಮÃನಾರಾಯಣ ಆಯೋಗವು ಪ್ರಕಟಿಸಿದ್ದ ಕರಡುಪಟ್ಟಿಯನ್ನು ಬದಲಾಯಿಸಿ ಕಾಂಗ್ರೆಸ್ ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಕಾಂಬ್ಳೆ ನೇತೃತ್ವದಲ್ಲಿ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವನ್ನು ರಚಿಸಿತ್ತು. ೨೦೨೩ ಸೆಪ್ಟೆಂಬರ್ ೫ ರಂದು ಪ್ರಕಟಗೊಂಡಿದ್ದ ಕರಡು ಪಟ್ಟಿಯಲ್ಲಿ ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗದೆ ಜಿಲ್ಲೆಯ ಜನತೆಗೆ ನಿರಾಸೆಯುಂಟಾಗಿತ್ತು. ಒಟ್ಟು ೨೯ ಕ್ಷೇತ್ರಗಳಿದ್ದ ಕೊಡಗಿನಲ್ಲಿ ಜನವರಿ ತಿಂಗಳಲ್ಲಿ ಪ್ರಕಟಗೊಂಡ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪುನರ್ವಿಂಗಡಣೆಯಲ್ಲಿ ೨೫ ಕ್ಷೇತ್ರಗಳಿಗೆ ಇಳಿಸಲಾಗಿತ್ತು.
ನಾಲ್ಕು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಕಡಿತಗೊಳಿಸಲಾಗಿತ್ತು.
ಸೆಪ್ಟೆಂಬರ್ ತಿಂಗಳ ೫ ರಂದು ಪ್ರಕಟಗೊಂಡಿದ್ದ ಕ್ಷೇತ್ರಗಳ ಪುನರ್ವಿಂಗಡಣೆ ಪಟ್ಟಿಯಲ್ಲಿ ಮತ್ತೆ ೨೫ ಜಿಲ್ಲಾ ಪಂಚಾಯಿತಿ ಏಕಸದಸ್ಯ ಕ್ಷೇತ್ರಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ಜನವರಿ ತಿಂಗಳಲ್ಲಿ ಪ್ರಕಟಗೊಂಡಿದ್ದ ಸೀಮಾ ನಿರ್ಣಯ ಆಯೋಗದಲ್ಲಿ ಕೊಡಗು ಜಿಲ್ಲೆಯ ೨೦೧೬ರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿದ್ದ ಕ್ಷೇತ್ರಗಳ ಹೆಸರು ಹಾಗೂ ಪಂಚಾಯಿತಿಗಳು ಅದಲು-ಬದಲಾಗಿತ್ತು. ಆದರೆ ಸೆಪ್ಟೆಂಬರ್ ತಿಂಗಳಲ್ಲಿ ಬಹುತೇಕ ೨೦೧೬ ರಲ್ಲಿ ಇದ್ದ ಕ್ಷೇತ್ರಗಳ ಮಾದರಿಯಲ್ಲಿಯೇ ಅಧಿಸೂಚನೆ ಹೊರಡಿಸಲಾಗಿತ್ತು.
ಆದರೆ ಕೆಲವೊಂದು ಕ್ಷೇತ್ರಗಳನ್ನು ಪುನರ್ವಿಂಗಡಿಸುವಾಗ ಎಡವಟ್ಟು ಉಂಟಾಗಿದ್ದು, ಕ್ಷೇತ್ರಕ್ಕೆ ಹತ್ತಿರವಲ್ಲದ ಗ್ರಾಮ ಪಂಚಾಯಿತಿಗಳನ್ನು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸೇರಿಸಲಾಗಿತ್ತು.
ಇದಕ್ಕೆ ಜಿಲ್ಲೆಯ ಜನರ ಮಧ್ಯೆ ದೊಡ್ಡ ಆಕ್ಷೇಪ ಕೂಡ ವ್ಯಕ್ತವಾಗಿತ್ತು.
ಕೊಡಗು ಜಿಲ್ಲಾ ಕಾಂಗ್ರೆಸ್ ನಿಯೋಗವು ಶಾಸಕರಾದ ಎ.ಎಸ್ ಪೊನ್ನಣ್ಣ ಹಾಗೂ ಡಾ. ಮಂಥರ್ ಗೌಡ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣಭೈರೇಗೌಡ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ, ಕೊಡಗು ಜಿಲ್ಲೆಗೆ ಪುನಃ ೨೯ ಜಿಲ್ಲಾ ಪಂಚಾಯಿತಿ ಸ್ಥಾನಗಳನ್ನು ನೀಡಿ, ವಿಶೇಷವಾಗಿ ಪರಿಗಣಿಸಬೇಕೆಂದು ಮನವಿ ಸಲ್ಲಿಸಿತ್ತು.