ಮಡಿಕೇರಿ, ಫೆ. ೧೨: ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ಏನು ಎಂದು ಬಿಜೆಪಿ ವೀರಾಜಪೇಟೆ ಶಾಸಕರಿಗೆ ಪ್ರಶ್ನಾಪತ್ರ ನೀಡಿರುವುದು ಬಿಜೆಪಿಯ ಪ್ರಚಾರದ ಗಿಮಿಕ್ ಎಂದು ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಟೀಕಿಸಿದ್ದಾರೆ.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾನತಾಡಿದರು. ಆತ್ಮಗೌರವ ಉಳ್ಳವರು ಇಚ್ಛಾಶಕ್ತಿ ಇರುವವರು ಶಾಸಕ ಪೊನ್ನಣ್ಣ ಅವರು ಗೃಹ ಕಚೇರಿಯಲ್ಲಿದ್ದ ಸಂದರ್ಭ ಹೋಗಿ ಪ್ರಶ್ನಾಪತ್ರಿಕೆ ನೀಡಬೇಕಿತ್ತು. ಅದನ್ನು ಬಿಟ್ಟು ಅವರಿಲ್ಲದ ಸಂದರ್ಭ ಕಮಲದ ಶಾಲನ್ನು ಹಾಕಿಕೊಂಡು ಬಿಜೆಪಿಯ ಪ್ರಚಾರಕ್ಕೆ ಹೋಗುವ ರೀತಿಯಲ್ಲಿ ತೆರಳಿ ಶಾಸಕರ ಅನುಪಸ್ಥಿತಿಯಲ್ಲಿ ಪ್ರಶ್ನಾಪತ್ರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಏಳೆಂಟು ತಿಂಗಳಾಗಿದೆಯಷ್ಟೇ. ಕೊಡಗಿನ ಇಬ್ಬರು ಶಾಸಕರುಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಏಳೆಂಟು ತಿಂಗಳ ಅವಧಿಯಲ್ಲಿ ಮಾಡುವುದು ಕಷ್ಟ ಎಂಬುದು ಎಲ್ಲರಿಗೂ ಗೊತ್ತಿದೆ. ಜಿಲ್ಲೆಯ ಶಾಸಕರುಗಳ ಉತ್ತಮ ಕಾರ್ಯವೈಖರಿ ಬಗ್ಗೆ ಪತ್ರಿಕೆಗಳಲ್ಲಿ ಜನವಲಯದಲ್ಲಿ ಪ್ರಚಾರವಾಗುತ್ತಿದ್ದು, ಬಿಜೆಪಿ ಇದನ್ನು ಸಹಿಸಿಕೊಳ್ಳದೆ ದ್ವೇಷದ ರಾಜಕೀಯ ಮಾಡಲು ಹೊರಟಿದೆ. ಇದರಿಂದ ಏನು ಪ್ರಯೋಜನ ಎಂದು ವೀಣಾ ಅಚ್ಚಯ್ಯ ಪ್ರಶ್ನಿಸಿದರು. ಏಳೆಂಟು ತಿಂಗಳಲ್ಲೇ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ಏನು ಎಂದು ಈಗಿನ ಶಾಸಕರನ್ನು ಪ್ರಶ್ನಿಸುವುದಾದರೆ

(ಮೊದಲ ಪುಟದಿಂದ) ೨೦ ವರ್ಷ ಬಿಜೆಪಿ ಶಾಸಕರಿದ್ದಾಗ ನಾವೆಷ್ಟು ಬಾರಿ ಹೋಗಿ ಕೇಳಿಬೇಕಿತ್ತು ಎಂದು ಹೇಳಿದ ವೀಣಾ ಅಚ್ಚಯ್ಯ ನಾವೆಂದಿಗೂ ದ್ವೇಷದ ರಾಜಕಾರಣ ಮಾಡಲಿಲ್ಲ ಎಂದು ಹೇಳಿದರು. ತಾನು ಎಂಎಲ್‌ಸಿ ಆಗಿದ್ದಾಗ ಸದನದಲ್ಲಿ ಕೊಡಗಿನ ಬಗ್ಗೆ ಪ್ರಶ್ನೆ ಕೇಳಿದರೆ ಬಿಜೆಪಿ ಸಚಿವರುಗಳಿಂದ ಸಮರ್ಪಕ ಉತ್ತರ ಸಿಗುತ್ತಿರಲಿಲ್ಲ ಎಂದು ಆರೋಪಿಸಿದ ವೀಣಾ ಅಚ್ಚಯ್ಯ ಭಾಗಮಂಡಲ ಮೇಲ್ಸೇತುವೆಯನ್ನು ಜೂನ್ ಅಂತ್ಯದೊಳಗೆ ಉದ್ಘಾಟನೆ ಮಾಡುವುದಾಗಿ ಉತ್ತರ ನೀಡಲಾಗಿತ್ತು. ಆದರೆ ಇದುವರೆಗೂ ಅದು ಉದ್ಘಾಟನೆ ಆಗಲಿಲ್ಲ. ಸದ್ಯದಲ್ಲೇ ನಮ್ಮ ಶಾಸಕರು ಇವುಗಳನ್ನೆಲ್ಲಾ ಮಾಡಲಿದ್ದಾರೆ ಎಂದರು.

ಸAಸದರ ಕೊಡುಗೆ ಏನು ?

ಕೊಡಗಿಗೆ ಸಂಸದ ಪ್ರತಾಪ್ ಸಿಂಹ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ ವೀಣಾ ಅಚ್ಚಯ್ಯ ಕೊಡಗಿನಲ್ಲಿ ಪ್ರವಾಹ ಉಂಟಾದ ಸಂದರ್ಭ ಕೇಂದ್ರ ಸರ್ಕಾರದದಿಂದ ನಿರಾಶ್ರಿತರಿಗಾಗಿ ಅವರು ಏನನ್ನು ಮಾಡಿಸಲಿಲ್ಲ. ಬಿಜೆಪಿ ಶಾಸಕರುಗಳಿದ್ದಾಗ ಕೊಡಗಿನತ್ತ ಬರದಿದ್ದ ಪ್ರತಾಪ್ ಸಿಂಹ ಬಿಜೆಪಿ ಶಾಸಕರುಗಳು ಸೋತ ಬಳಿಕ ಬರುತ್ತಿದ್ದಾರೆ. ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಶಾಸಕರ ಗೆಲುವಿಗಿಂತ ಸೋಲೇ ಬೇಕಿತ್ತು ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ಕುಟುಕಿದರು. ಹೈವೇ ವಿಚಾರ ಬಿಟ್ಟು ಬೇರೆನನ್ನು ಪ್ರತಾಪ್ ಸಿಂಹ ಅವರು ಮಾತನಾಡುವುದಿಲ್ಲ ಎಂದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಭಾರತೀಯರೆಲ್ಲರ ಶ್ರಮದಿಂದ ಸಾಧ್ಯವಾಗಿದೆ. ಚುನಾವಣೆ ವೇಳೆ ಬಿಜೆಪಿ ಇದಕ್ಕೆ ಬೇರೆ ಬಣ್ಣ ಕಟ್ಟುವುದು ಬೇಡ ಎಂದರು. ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದಾಗ ಮಡಿಕೇರಿಗೆ ಬಂದ ಸಂದರ್ಭ ನಗರಸಭೆ ಅಧ್ಯಕ್ಷರು, ಸದಸ್ಯರು ‘ಗೋಬ್ಯಾಕ್ ಸಿದ್ದರಾಮಯ್ಯ’ ಎಂದು ಘೋಷಣೆ ಕೂಗಿದ್ದರು. ಅದೇ ಅಧ್ಯಕ್ಷರು ಸದಸ್ಯರುಗಳು ಮುಖ್ಯಮಂತ್ರಿಯಾಗಿ ಇತ್ತೀಚೆಗೆ ಸಿದ್ದರಾಮಯ್ಯ ಅವರು ಮಡಿಕೇರಿ ಬಂದಾಗ ನೂತನ ಎಸ್ಪಿ ಕಚೇರಿಯಲ್ಲಿ ಸಿದ್ದರಾಮಯ್ಯ ಅವರಿಗೆ ಸನ್ಮಾನ ಮಾಡಲು ಆಗಿಮಿಸಿದ್ದರು ಎಂದು ಲೇವಡಿ ಮಾಡಿ ವೀಣಾ ಅಚ್ಚಯ್ಯ ಬಿಜೆಪಿಯವರ ಆಗಿನ ವರ್ತನೆಯೆ ನಮಗೆ ‘ಪ್ಲಸ್ ಪಾಯಿಂಟ್’ ಎಂದು ಹೇಳಿದರು. ಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ಮಂಡೀರ ಸದಾ ಮುದ್ದಪ್ಪ, ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ ಉಪಸ್ಥಿತರಿದ್ದರು.