ಸೋಮವಾರಪೇಟೆ, ಫೆ. ೧೨: ಕ್ಷೇತ್ರದ ಶಾಸಕರಾಗಿ ಆರಿಸಿ ಬಂದು ೧೦ ತಿಂಗಳು ಕಳೆದಿದ್ದು, ಈ ಅವಧಿಯಲ್ಲಿ ನಮ್ಮ ಕ್ಷೇತ್ರಕ್ಕೆ ಶಾಸಕರಾಗಿ ನಿಮ್ಮ ಕೊಡುಗೆ ಏನು? ಎಂಬುದರ ಬಗ್ಗೆ ಜನರಿಗೆ ಮಾಹಿತಿಯನ್ನು ಕೊಡಿ ಎಂದು ಬಿಜೆಪಿ ಸೋಮವಾರಪೇಟೆ ಮಂಡಲದ ವತಿಯಿಂದ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂಥರ್ ಗೌಡ ಅವರ ಸೋಮವಾರಪೇಟೆ ಕಚೇರಿಗೆ ಮನವಿ ಸಲ್ಲಿಸಲಾಯಿತು.

‘ಶಾಸಕರೇ ಮತದಾರರಿಗೆ ಉತ್ತರಿಸಿ’ ಕಾರ್ಯಕ್ರಮದ ಅಂಗವಾಗಿ ಬಿಜೆಪಿ ಪದಾಧಿಕಾರಿಗಳು, ಶಾಸಕರ ಕಚೇರಿಗೆ ತೆರಳಿ, ಕಚೇರಿ ಸಿಬ್ಬಂದಿ ಮೂಲಕ ಶಾಸಕರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಈ ಸಂದರ್ಭ ಸೋಮವಾರಪೇಟೆ ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್, ಬಿಜೆಪಿ ಕೊಡಗು ಜಿಲ್ಲಾ ಉಪಾಧ್ಯಕ್ಷರು ಹೆಚ್.ಕೆ. ಮಾದಪ್ಪ, ಮನು ಕುಮಾರ್ ರೈ, ಕೊಡಗು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಪ್ರಮುಖರಾದ ಮೋಕ್ಷಿತ್, ದರ್ಶನ್ ಜೋಯಪ್ಪ, ಪ್ರಜಾ ಪೂಣಚ್ಚ, ಸೋಮೇಶ್, ಅಶೋಕ್, ಪ್ರಿಜೇಶ್, ಸಂಪ್ರೀತ್ ಸಿ.ವಿ. ಸೇರಿದಂತೆ ಇತರರು ಉಪಸ್ಥಿತರಿದ್ದರು.