ಮಡಿಕೇರಿ, ಫೆ. ೧೧: ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ನಡೆದ ಸೌಹಾರ್ದ ಪಂದ್ಯದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.

೮ ಓವರ್‌ನ ಮೂರು ಪಂದ್ಯಗಳಲ್ಲಿ ೨-೧ ಪಂದ್ಯಗಳಿAದ ಕೊಡಗು ಜಿಲ್ಲಾ ಪೊಲೀಸ್ ತಂಡವನ್ನು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ತಂಡ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಪತ್ರಕರ್ತರ ತಂಡ ಕ್ಷೇತ್ರ ರಕ್ಷಣೆಗೆ ಮುಂದಾಯಿತು. ನಿಗದಿತ ೮ ಓವರ್‌ನಲ್ಲಿ ಕೊಡಗು ಜಿಲ್ಲಾ ಪೊಲೀಸ್ ತಂಡ ೪ ವಿಕೆಟ್ ಕಳೆದುಕೊಂಡು ೭೩ ರನ್ ಕಲೆಹಾಕಿತು. ತಂಡದ ಪರ ಮನೋಹರ್ ೨೫, ನಾಗೇಶ್ ೩೧ ರನ್ ದಾಖಲಿಸಿದರು. ಗುರಿ ಬೆನ್ನಟ್ಟಿದ ಪತ್ರಕರ್ತರ ತಂಡ ೩ ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ತಂಡದ ಪರ ಜಯಪ್ರಕಾಶ್ ೧೯, ಹೇಮಂತ್ ೩೫ ರನ್ ಕಲೆ ಹಾಕಿದರು.

೨ನೇ ಪಂದ್ಯದಲ್ಲಿ ಟಾಸ್ ಸೋತ ಕೊಡಗು ಜಿಲ್ಲಾ ಪೊಲೀಸ್ ತಂಡ ನಿಗದಿತ ೮ ಓವರ್‌ನಲ್ಲಿ ೫೬ರನ್ ಕಲೆಹಾಕಿತು. ಗುರಿಬೆನ್ನಟ್ಟಿದ ಪತ್ರಕರ್ತರ ತಂಡ ೯ ವಿಕೆಟ್‌ಗೆ ೪೦ ರನ್ ದಾಖಲಿಸಿ ೧೫ರನ್‌ಗಳ ಅಂತರದಲ್ಲಿ ಸೋಲುಂಡಿತ್ತು.

೩ನೇ ಪಂದ್ಯದಲ್ಲಿ ಟಾಸ್ ಸೋತ ಜಿಲ್ಲಾ ಪೊಲೀಸ್ ತಂಡ ನಿಗದಿತ ೮ ಓವರ್‌ನಲ್ಲಿ ೪ ವಿಕೆಟ್ ಕಳೆದುಕೊಂಡು ೮೦ ರನ್ ಕಲೆ ಹಾಕಿತು. ತಂಡದ ಪರ ಮನೋಹರ್ ೨೪, ನಾಗೇಶ್ ೨೩ ರನ್ ಕಲೆ ಹಾಕಿದರು. ಗುರಿ ಬೆನ್ನಟ್ಟಿದ ಪತ್ರಕರ್ತರ ತಂಡ ೨ ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ತಂಡದ ಪರ ಆದರ್ಶ್ ಅದ್ಕಲೇಗಾರ್ ೩೫, ಹೇಮಂತ್ ೩೧ ರನ್ ದಾಖಲಿಸಿದರು.

ಕ್ರೀಡಾಕೂಟಕ್ಕೆ ಚಾಲನೆ: ಸೌಹಾರ್ದ ಪಂದ್ಯಾಟಕ್ಕೆ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಬಿ.ಆರ್. ಸವಿತಾ ರೈ ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ, ಪತ್ರಕರ್ತರು ಹಾಗೂ ಪೊಲೀಸರ ನಡುವಿನ ಬಾಂಧವ್ಯವನ್ನು ವೃದ್ಧಿಗೊಳಿಸಲು ಕ್ರೀಡಾಕೂಟ ಸಹಕಾರಿಯಾಗಿದೆ ಎಂದರು.

ಜಿಲ್ಲಾ ಸಶಸ್ತç ಪಡೆ ಇನ್ಸ್ ಪೆಕ್ಟರ್ ಚೆನ್ನನಾಯಕ್ ಮಾತನಾಡಿ, ಪೊಲೀಸ್ ಇಲಾಖೆಯ ಕುರಿತು ಸಾರ್ವಜನಿಕರಲ್ಲಿ ನಕಾರಾತ್ಮಕ ಭಾವನೆಯಿದೆ. ಪೊಲೀಸರು ಇರುವುದೇ ಜನರ ರಕ್ಷಣೆಗಾಗಿ ಎಂಬ ಸತ್ಯಾಂಶವನ್ನು ಜನರಿಗೆ ಅರ್ಥೈಸುವಲ್ಲಿ ಮಾಧ್ಯಮಗಳ ಪಾತ್ರ ಅಪಾರವಾಗಿದೆ. ಇಲಾಖೆಯ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಮೂಡಿಸಲು ಮಾಧ್ಯಮಗಳು ಸಹಕರಿಸಬೇಕೆಂದು ಹೇಳಿದರು.

ಸಮಾರೋಪ ಸಮಾರಂಭ: ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಪೊಲೀಸರು ಹಾಗೂ ಪತ್ರಕರ್ತರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.

ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ನೀಡಿ ಗೌರವಿಸ ಲಾಯಿತು. ಆರ್‌ಎಸ್‌ಐ ಗಳಾದ ರಾಕೇಶ್, ಮರಿಯಣ್ಣ, ಮಂಜುನಾಥ್ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮಂಜು ಸುವರ್ಣ, ಪಾರ್ಥ ಚಿಣ್ಣಪ್ಪ, ಪತ್ರಕರ್ತ ಸಂಘದ ಸದಸ್ಯರು ಹಾಗೂ ಪೊಲೀಸ್ ಸಿಬ್ಬಂದಿಗಳಿದ್ದರು.