ಚೆಯ್ಯಂಡಾಣೆ, ಫೆ. ೧೨: ನಾಪೋಕ್ಲು ಸಮೀಪದ ಕೊಳಕೇರಿ ದರ್ಗಾ ಷರೀಫ್‌ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಔಲಿಯಾಗಳ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭ ತಾ.೧೬ ರಿಂದ ೨೦ ರವರೆಗೆ ವಿವಿಧ ಕಾರ್ಯಕ್ರಮಗಳ ಮೂಲಕ ನಡೆಸಲು ತೀರ್ಮಾನಿಸಲಾಗಿದೆ ಎಂದು ಕೊಳಕೇರಿ ಸುನ್ನಿ ಮುಸ್ಲಿಂ ಜಮಾಅತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ತಾ.೧೬ ಮಧ್ಯಾಹ್ನ ೨ ಗಂಟೆಗೆ ಕೊಳಕೇರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಬಿ.ಎ.ಅಬ್ದುಲ್ ನಾಸಿರ್ ಧ್ವಜಾರೋಹಣ ನೆರವೇರಿಸುವುದರ ಮೂಲಕ ಉರೂಸ್‌ಗೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ನಂತರ ಸಾಮೂಹಿಕ ಪ್ರಾರ್ಥನೆ ಹಾಗೂ ಮಖಾಂ ಅಲಂಕಾರಕ್ಕೆ ಮಹಲ್ ಖತೀಬ್ ಶಹಜಹಾನ್ ಸಖಾಫಿ ನೇತೃತ್ವ ವಹಿಸಲಿದ್ದಾರೆ. ಜಲಾಲಿಯ ರಾತೀಬ್‌ಗೆ ಅಸ್ಸಯ್ಯದ್ ಜಹಫರ್ ಸ್ವಾದಿಕ್ ಕುಂಬೋಲ್ ತಂಗಳ್ ನೇತೃತ್ವ ನೀಡಲಿದ್ದಾರೆ.

ಖುರ್ರತುಸ್ವಾದತ್ ಅಸ್ಸಯ್ಯದ್ ಫಝಲ್ ಕೊಯಮ್ಮ ಅಲ್ ಬುಖಾರಿ ಕೂರತ್ ತಂಗಳ್, ದೇವರ್ಸೋಲ ಅಬ್ದುಲ್ ಸಲಾಂ ಮುಸ್ಲಿಯಾರ್, ಅಸ್ಸಯ್ಯದ್ ಶಿಯಾಬುದ್ದೀನ್ ಅಲ್ ಬುಖಾರಿ ಕಡಲುಂಡಿ ತಂಗಳ್, ನೌಫಲ್ ಸಖಾಫಿ ಕಳಸ ಮತ್ತಿತರ ಸಾಮಾಜಿಕ, ರಾಜಕೀಯ, ಉಲಮಾ, ಉಮಾರ ನೆತಾರರು ಭಾಗವಹಿಸಲಿದ್ದಾರೆ. ತಾ. ೧೯ ರಂದು ಸಂಜೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ.