ಸುಂಟಿಕೊಪ್ಪ, ಡಿ.೧೦ : ಬಾಲ ಪ್ರತಿಭೆ ಶ್ರೀಶಾ ಮತ್ತು ಅವರ ಪೋಷಕರು ಯೋಧರನ್ನು ಸ್ಮರಿಸುವುದರೊಂದಿಗೆ ಮತ್ತೇ ‘ಹುಟ್ಟಿ ಬನ್ನಿ ಯೋಧರೆ' ಎಂಬ ಕಾರ್ಯಕ್ರಮದಲ್ಲಿ ಭಾರತೀಯ ಸೇನಾ ಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಅವರ ಪುಣ್ಯಸ್ಮರಣೆಯನ್ನು ಮಾಡಲಾಯಿತು.

ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕಾರ್ಯಕ್ರಮದ ರೂವಾರಿ ಶ್ರೀಶಾ ಅವರು, ೨೦೨೧ ರ ಡಿ.೮ ರಂದು ತಮಿಳುನಾಡಿನ ಕುನೂರು ಬಳಿ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಭಾರತೀಯ ಸೇನಾ ಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಇತರ ಸೇನಾಧಿಕಾರಿಗಳ ಸಾಧನೆಯನ್ನು ಮೆಲುಕು ಹಾಕಿದರು. ಹಾಗೆಯೇ, ಬಿಪಿನ್ ರಾವತ್ ಅವರ ವಿದ್ಯಾಭ್ಯಾಸ, ಸೇನೆಯಲ್ಲಿ ಅವರ ಶೌರ್ಯ, ಸಾಹಸಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದಲ್ಲದೇ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ಅವರ ಬಗ್ಗೆ ಮಾಹಿತಿ ನೀಡಿದರು.

ಮೊದಲಿಗೆ ಬಿಪಿನ್ ರಾವತ್ ಮತ್ತು ಹುತಾತ್ಮ ವೀರ ಯೋಧರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಶ್ರೀಶಾ ಅವರ ಪೋಷಕರಾದ ಶಿಜು, ಸಂಧ್ಯಾ, ಸಪಾಯಿ ಕರ್ಮಚಾರಿ ಜಿಲ್ಲಾಧ್ಯಕ್ಷ ಆರ್. ರಂಗಸ್ವಾಮಿ, ಹರದೂರು ಗ್ರಾಮ ಪಂಚಾಯಿತಿ ಸದಸ್ಯ ಬಿ.ಡಿ. ಪದ್ಮನಾಭ, ಕೊಡಗು ಮೀಡಿಯಾದ ಸಿಬ್ಬಂದಿ ಕಾರ್ತಿಕ್, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಇದ್ದರು.