ಸುಂಟಿಕೊಪ್ಪ, ನ. ೨೪: ಇಲ್ಲಿನ ಮಾದಾಪುರ ರಸ್ತೆಯಲ್ಲಿರುವ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ವಾರ್ಷಿಕ ಸಭೆ ಜಿಲ್ಲಾಧ್ಯಕ್ಷ ಪಿ.ಬಿ. ಜನಾರ್ಧನ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಮೊಗೇರ ಸಮಾಜವನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸುವ ಜವಾಬ್ದಾರಿ ಇದ್ದು, ಜಿಲ್ಲೆಯ ಎಲ್ಲಾ ತಾಲೂಕಿನ ಸಮಾಜದ ಅಧ್ಯಕ್ಷರುಗಳೊಂದಿಗೆ ಸಂಘವನ್ನು ಬಲಪಡಿಸಲೂ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಮೊಗೇರ ಸಮಾಜದ ಗೌರವ ಸಲಹೆಗಾರ ಪಿ.ಎಂ. ರವಿ ಮಾತನಾಡಿ, ಮೊಗೇರ ಜನಾಂಗದ ಸಂಸ್ಕೃತಿ, ಪರಂಪರೆ, ಪದ್ಧತಿ, ಉಳಿಸುವುದರೊಂದಿಗೆ ಜನಾಂಗದ ಅಭಿವೃದ್ಧಿಗೆ ಸಂಘಟನೆಯ ಅತ್ಯವಶ್ಯಕತೆಯಿದ್ದು ಪ್ರತಿಯೊಬ್ಬರು ಸಂಘಟನೆಯೊAದಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ಮೊಗೇರ ಜನಾಂಗಕ್ಕೆ ತನ್ನದೇ ಆದಂತಹ ಇತಿಹಾಸವಿದ್ದು ಎಲ್ಲಾ ಕ್ಷೇತ್ರದಲ್ಲಿ ಮೊಗೇರ ಸಮುದಾಯವು ಗುರುತಿಸಿಕೊಳ್ಳ್ಳುವಂತಾಗಬೇಕು. ಅಲ್ಲದೆ ಜಿಲ್ಲೆಯಾದ್ಯಂತ ಮೊಗೇರ ಸಮಾಜದ ಸಂಘಟನೆಯನ್ನು ಬಲಿಷ್ಠಗೊಳಿಸಲು ಯುವಕ-ಯುವತಿಯರು ಮುಂದೆ ಬರಬೇಕೆಂದು ಕರೆ ನೀಡಿದರು. ಜಿಲ್ಲಾ ಗೌರವ ಅಧ್ಯಕ್ಷ ಗೌತಮ್ ಶಿವಪ್ಪ ಮಾತನಾಡಿ, ಸಮಾಜದ ಬೆಳವಣಿಗೆಗೆ ಎಲ್ಲರೂ ಮುಂಚೂಣಿಯಲ್ಲಿ ನಿಲ್ಲಬೇಕು. ನಮ್ಮ ಸಮುದಾಯ ಆರ್ಥಿಕವಾಗಿ ಹಿಂದುಳಿದಿದ್ದು ಸಮಾಜ ಅಭಿವೃದ್ಧಿ ಆಗಬೇಕಾದರೆ ನಾವೆಲ್ಲರೂ ಒಗ್ಗಟಾಗಿ ಸಂಘಟನೆಯನ್ನು ಬಲಪಡಿಸೋಣ ಎಂದು ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಣ್ಣೀರಳ್ಳದ ಹರೀಶ, ಹಿರಿಯ ಸದಸ್ಯ ಪೊಡಿಯಾ, ಜಿಲ್ಲಾ ಸಮಿತಿ ಸದಸ್ಯ ಎಂ.ಜಿ. ಚಂದ್ರ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ವಸಂತ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಪಿ. ದೇವಪ್ಪ, ಸೋಮನಾಥ್ ಸುಂಟಿಕೊಪ್ಪ ಉಪಸ್ಥಿತರಿದ್ದರು.