ವೀರಾಜಪೇಟೆ, ನ. ೨೦: ಕೊಡಗಿನ ಭಕ್ತರ ಹೃದಯದಲ್ಲಿ ಬೈತೂರು ದೇವರಿದ್ದು ಎಲ್ಲರ ಸಹ ಭಾಗಿತ್ವದಲ್ಲಿ ದೇವಾಲಯ ಅಭಿವೃದ್ಧಿ ಕಾರ್ಯವನ್ನು ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು ಎಂದು ಕೇರಳದ ದೇವಸಂ ಬೋರ್ಡ್ನ ಆಯುಕ್ತ ಹಾಗೂ ಕಾರ್ಯದರ್ಶಿ ನಂದಕುಮಾರ್ ಹೇಳಿದರು.

ಆದಿ ಬೈತೂರು ದೇವಾಲಯದಲ್ಲಿ ಮೂಲಸೌಕರ್ಯ ಕೊರತೆಯ ಬಗ್ಗೆ ವೀರಾಜಪೇಟೆ ಕೊಡವ ಸಮಾಜದಲ್ಲಿ ಬೈತೂರು ದೇವತಕ್ಕರಾದ ಪುಗ್ಗೆರ ಪೊನ್ನಪ್ಪ ಅವರು ಆಯೋಜಿಸಿದ್ದ ಜಂಟಿ ಸಭೆಯಲ್ಲಿ ಮಾತನಾಡಿದರು. ಕೊಡಗಿನ ಜನರ ಭಕ್ತಿ, ಪ್ರೀತಿ ವಿಶ್ವಾಸ ಹಾಗೂ ಆಥಿತ್ಯಕ್ಕೆ ಆಭಾರಿಯಾಗಿದ್ದೇನೆ. ಈಗಾಗಲೇ ತಕ್ಕ ಮುಖ್ಯಸ್ಥರಾದ ಪುಗ್ಗೆರ ಪೊನ್ನಪ್ಪ ಹಾಗೂ ಬೈತೂರು ಕಾಲ್ಯಾರ್ ಕೇತ್ರದ ಟ್ರಸ್ಟಿ ಮಾಳೇಟಿರ ರತ್ನ ಸುಬ್ಬಯ್ಯ ಅವರುಗಳು ದೇವಾಲಯ ದಲ್ಲಿ ಕೊಡಗಿನಿಂದ ಬರುವ ಭಕ್ತರಿಗೆ ಮೂಲ ಸೌಕರ್ಯಗಳ ಕೊರತೆಯ ಬಗ್ಗೆ ವಿವರ ನೀಡಿದ್ದಾರೆ. ಬೇಟೆ ಕುರುಮಗನ್ ಗುಡಿಯ ಸುತ್ತ ತಡೆಗೋಡೆ ನಿರ್ಮಾಣ, ಭಕ್ತರು ನದಿಗೆ ತೆರಳುವ ರಸ್ತೆ, ತಂತ್ರಿಗಳ ಕೊಠಡಿ, ಶೌಚಾಲಯ ಇತ್ಯಾದಿ ಕಾರ್ಯಗಳನ್ನು ಶೀಘ್ರದಲ್ಲಿಯೆ ಕೈಗೆತ್ತಿಕೊಳ್ಳಲಾಗುವುದು. ಬೋಜನ ಶಾಲೆ ಇರುವ ಸ್ಥಳ ವಿವಾದದಲ್ಲಿದ್ದು ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಸರ್ವೆ ಕಾರ್ಯ ಸಮಸ್ಯೆ ಇತ್ಯರ್ಥ ಪಡಿಸಲಾಗುವುದು ಎಂದು ಭರವಸೆ ನೀಡಿದರು.

ಕೇತ್ರದ ಅಭಿವೃದ್ಧಿಗಾಗಿ ತಕ್ಕಮುಖ್ಯಸ್ಥರು, ಟ್ರಸ್ಟಿಗಳು ಸೇರಿದಂತೆ ೧೫ ಸದಸ್ಯರ ಸಮಿತಿ ರಚಿಸಲಾಗುವುದು. ಅದರಲ್ಲಿ ಕೊಡಗಿಗೆ ೫ ಸದಸ್ಯತ್ವ ನೀಡ ಲಾಗುವುದು.

(ಮೊದಲ ಪುಟದಿಂದ) ಅಧ್ಯಕ್ಷರನ್ನು ಹೊರತುಪಡಿಸಿ ಉಳಿದ ೫ ಜನರನ್ನು ಕೊಡವ ಸಮಾಜ ಆಯ್ಕೆ ಮಾಡುವಂತೆ ತಿಳಿಸಿದರು.

ದೇವ ತಕ್ಕರಾದ ಪುಗ್ಗೆರ ಪೊನ್ನಪ್ಪ ಮಾತನಾಡಿ, ಅನಾದಿ ಕಾಲದಿಂದಲೂ ಪುಗ್ಗೆರ ಕುಟುಂಬ ಬೈತೂರು ದೇವಾಲಯದ ಕೆಲಸ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಕೊಡಗಿನಿಂದ ಬೈತೂರಿಗೆ ತೆರಳುವ ಭಕ್ತರಿಗೆ ಮೂಲ ಸೌಕರ್ಯಗಳ ಕೊರತೆ ಇದೆ. ಕಳೆದ ವಾರದಲ್ಲಿ ಬಾಳೆಯಡ ಕುಟುಂಬ ದವರು ಭಕ್ತರ ಅನುಕೂಲಕ್ಕಾಗಿ ಗ್ಯಾಲರಿ ನಿರ್ಮಿಸಲು ರೂ. ೨.೩೧ ಲಕ್ಷಗಳನ್ನು ನೀಡಿದ್ದಾರೆ. ಉತ್ಸವದ ಒಳಗೆ ಕಾಮಗಾರಿಯಲ್ಲಿ ಪೂರ್ಣಗೊಳಿಸಲಾಗುವುದು. ಮೂಲ ಸೌಕರ್ಯಗಳ ಭೋಜನಶಾಲೆ, ಶೌಚಾಲಯ, ನದಿಗೆ ತೆರಳುವ ರಸ್ತೆ, ನದಿಯಲ್ಲಿ ಹೆಂಗಸರು ಮತ್ತು ಗಂಡಸರಿಗೆ ಬಟ್ಟೆ ಬದಲಿಸುವ ಕೋಣೆಗಳ ಅವಶ್ಯಕತೆ ಇದೆ. ದೇವಾಲಯದ ಗರ್ಭಗುಡಿ ಮುಂಭಾಗ ಇರುವ ಕಟ್ಟಡವನ್ನು ಕೆಡವಿ ಗೋಪುರ ಮಾದರಿಯಲ್ಲಿ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಅಂದಾಜು ಒಂದು ಕೋಟಿ ರೂಗಳ ಅವಶ್ಯಕತೆ ಇರುವುದರಿಂದ ದಾನಿಗಳು ಕೈ ಜೋಡಿಸಬೇಕು ಎಂದು ಹೇಳಿದರು. ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಮಾತನಾಡಿ, ಕೊಡಗಿನ ಮಣ್ಣಿಗೆ ದೈವ ಶಕ್ತಿ ಇದೆ. ದೇವಸ್ಥಾನಗಳ ಜೀರ್ಣೋದ್ಧಾರದ ವಿಚಾರ ಬಂದರೆ ಎಷ್ಟೇ ಬಡತನದಲ್ಲಿ ಇರುವವರು ಕೂಡ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸುತ್ತಾರೆ. ದೇವಾಲಯಗಳಲ್ಲಿ ತಕ್ಕರಿಗಿರುವ ಘನತೆ ಗೌರವ ಬೇರೆ ಯಾರಿಗು ಸಿಗುವುದಿಲ್ಲ. ಅದರ ಮಹತ್ವವನ್ನು ಅರಿತು ನಾವು ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಹೇಳಿದರು. ಮಲಬಾರ್ ದೇವಸಂ ಬೋರ್ಡ್ ನಿರ್ದೇಶಕ ಮಧುಸೂದನ್ ಮಾತನಾಡಿ, ಮಲಬಾರ್ ದೇವಸಂ ಬೋರ್ಡ್ನ ಅಧಿನದಲ್ಲಿ ೧೪೫೦ ದೇವಾಲಯಗಳಿದೆ. ಯಾವ ದೇವಾಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ ಅಂತಹ ದೇವಾಲಯಗಳ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಬೈತೂರು ದೇವಾಲಯದ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರದಲ್ಲಿಯೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು. ವೀರಾಜಪೇಟೆ ಕೊಡವ ಸಮಾಜದ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ ಮಾತನಾಡಿ, ನಾವು ಮಾಡಿರುವ ತಪ್ಪಿಗೆ ಅವರು ತಪ್ಪಡ್ಕ ಕಟ್ಟಿ ಕ್ಷಮೆ ಕೇಳುವಂತಾಗಿದೆ. ದೇವಾಲಯಗಳಲ್ಲಿ ತಕ್ಕರಿಗೆ ಜವಾಬ್ದಾರಿ ನೀಡಿದರೆ ದೇವನೆಲೆ ಅಭಿವೃದ್ಧಿ ಕಾಣುತ್ತದೆ. ದೇಶತಕ್ಕ, ದೇವತಕ್ಕ, ನಾಡುತಕ್ಕ, ಊರುತಕ್ಕರನ್ನು ಸೇರಿಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದರೆ ಉತ್ತಮವಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಬೈತೂರು ದೇವಾಲಯದ ಅಧ್ಯಕ್ಷ ಓ.ಪಿ. ರಾಜನ್, ಅಖಿಲ ಕೊಡವ ಸಮಾಜದ ಖಜಾಂಚಿ ಮಂಡೇಪAಡ ಸುಗುಣ ಮುತ್ತಣ್ಣ, ಮಾಜಿ ಒಲಂಪಿಯನ್ ಬಾಳೆಯಡ ಸುಬ್ರಮಣಿ, ಆರಾಯಿರನಾಡು ಉಪಾಧ್ಯಕ್ಷ ಚೇಂದAಡ ಪೊನ್ನಪ್ಪ, ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷ ಚೆಪ್ಪುಡಿರ ಪೊನ್ನಪ್ಪ, ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ, ಯೂಕೋ ಸಂಘಟಣೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡAಡ ಸಿ ನಾಣಯ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಣ್ಣ ಜನಾಂಗದ ಪುಟ್ಟಬೆಳ್ಯಪ್ಪ ಉಪಸ್ಥಿತರಿದ್ದರು. ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪುಗ್ಗೆರ ಪ್ರವೀಣ್ ವಂದಿಸಿದರು.