ಸೋಮವಾರಪೇಟೆ, ಆ. ೨೦: ೧೨ನೇ ಶತಮಾನದಲ್ಲಿ ಎಲ್ಲಾ ಜಾತಿ ಸಮುದಾಯಗಳ ಶರಣರಿಂದ ರೂಪಿತವಾದ ವಚನಸಾಹಿತ್ಯ ಮನುಷ್ಯನ ಆತ್ಮದ ಉದ್ಧಾರಕ್ಕೆ ದಿವ್ಯ ಔಷಧಿಯಿದ್ದಂತೆ ಎಂದು ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಎಸ್.ಎನ್. ನರಗುಂದ್ ಬಣ್ಣಿಸಿದರು.

ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ತೋಳೂರು ಶೆಟ್ಟಳ್ಳಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ "ವಚನಗಳ ನಡಿಗೆ-ಶಾಲಾ ಕಾಲೇಜುಗಳೆಡೆಗೆ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಜಾತಿ ಪದ್ಧತಿ, ಅಜ್ಞಾನದ ಅಂಧ ಶ್ರದ್ಧೆಗಳೇ ತುಂಬಿದ್ದ ಅಂದಿನ ದಿನಗಳಲ್ಲಿ ಅಮೃತಮಯವಾದ ಶರಣರ ನುಡಿಗಳು ವಿಚಾರದ ಜ್ಯೋತಿಯನ್ನು ಹೊತ್ತಿಸಿ ಸಾಮಾಜಿಕ ಪರಿವರ್ತನೆಯ ಬೆಳಕು ನೀಡಿದವು. ಹಾಗಾಗಿ ಇಂದಿನ ವಿದ್ಯಾರ್ಥಿಗಳು ವಚನ ಸಾಹಿತ್ಯವನ್ನು ಅರಿಯುವ ಹಾಗೂ ಅವುಗಳ ಸಾರದಂತೆ ನಡೆದುಕೊಳ್ಳುವ ಅನಿವಾರ್ಯತೆಯಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಿಕ್ಷಕ ಕೆ.ಆರ್. ರಮೇಶ್ ಮಾತನಾಡಿ, ವಿಶ್ವ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಕೊಟ್ಟ ಬಹು ದೊಡ್ಡ ಕಾಣಿಕೆ ಎಂದರೆ ಅದು ವಚನ ಸಾಹಿತ್ಯ. ಮಹಿಳೆಯರಿಗೆ ಮೊಟ್ಟ ಮೊದಲ ಬಾರಿಗೆ ಸ್ವಾತಂತ್ರ‍್ಯ ನೀಡಿದ ಹಾಗೆಯೇ ಮೂಢನಂಬಿಕೆ ಹಾಗೂ ಶೋಷಣೆಗಳಲ್ಲಿ ಮುಳುಗಿದ್ದ ಅಂದಿನ ಜನರಿಗೆ ಜೀವನದ ಬೆಳಕು ತೋರಿದ್ದು ಹನ್ನೆರಡನೇ ಶತಮಾನದ ಬಸವಾದಿ ಶರಣರು ಎಂದು ವಚನ ಸಾಹಿತ್ಯದ ಕುರಿತು ಮಾತನಾಡಿದರು.

ಯುವ ಬರಹಗಾರ ವೈ.ಎಸ್. ನಿಶ್ಚಯ್ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿನ ಕಾಯಕ ಹಾಗೂ ದಾಸೋಹ ಪರಂಪರೆ ಮತ್ತು ಸಾಮಾಜಿಕವಾದ ಬದಲಾವಣೆಗೆ ವಚನ ಸಾಹಿತ್ಯ ಕೊಟ್ಟ ಬಳುವಳಿ ಕುರಿತು ಉಪನ್ಯಾಸ ನೀಡಿದರು.

ವಚನ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್. ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು. ಡಾ. ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ ರೆಡ್ಡಿ ಇದ್ದರು. ಇದೇ ಸಂದರ್ಭ ಶಾಲಾ ವಿದ್ಯಾರ್ಥಿಗಳಿಂದ ವಚನ ಗಾಯನ ಹಾಗೂ ನೃತ್ಯ ಕಾರ್ಯಕ್ರಮಗಳು ಏರ್ಪಟ್ಟವು. ವಿದ್ಯಾರ್ಥಿನಿ ಪ್ರಾರ್ಥನಾ, ತನುಷಾ, ಲಾಸ್ಯ, ಮೌಲ್ಯ ಹಾಗೂ ಲಾಂಛನಾ ಅವರ ತಂಡಗಳಿAದ ವಚನ ಗಾಯನ ಏರ್ಪಟ್ಟಿತು. ಶಿಕ್ಷಕಿ ಶಬಾನಾ ನಿರೂಪಿಸಿ, ಶಭರಿಗಿರೀಶ್ ಸ್ವಾಗತಿಸಿ, ಕನ್ನಡ ಶಿಕ್ಷಕಿ ಎಂ.ಡಿ. ಭವ್ಯ ವಂದಿಸಿದರು.