ವೀರಾಜಪೇಟೆ, ಜೂ. ೫: ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ವತಿಯಿಂದ ಕಳೆದ ನಾಲ್ಕು ವರ್ಷಗಳಿಂದ ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಧಿಕಾರಿಗಳಾಗಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ಶ್ರೀಶೈಲ ಬೀಳಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಶೈಲ ಬೀಳಗಿ ಅವರು ವಿದ್ಯಾರ್ಥಿಗಳ ಮುಂದಿನ ಜೀವನವು ಉತ್ತಮವಾಗಿ ರೂಪುಗೊಳ್ಳುವುದರಲ್ಲಿ ಶಿಕ್ಷಣದ ಪಾತ್ರವು ಬಹುಮುಖ್ಯವಾದದ್ದು. ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಅವಿರತ ಶ್ರಮಪಟ್ಟು ಶಾಲೆಗೆ ಕಳುಹಿಸುತ್ತಾರೆ. ಇದನ್ನರಿತು ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಶಿಕ್ಷಣ ಪಡೆದು ಶಾಲೆಗೂ ಪೋಷಕರಿಗೂ ತಮ್ಮ ನಾಡಿಗೂ ಕೀರ್ತಿ ತರುವಂತಾಗಬೇಕು. ವಿದ್ಯೆ ಇದ್ದರೆ ನಾವು ಏನನ್ನೂ ಬೇಕಾದರೂ ಸಾಧನೆ ಮಾಡಬಹುದು. ವಿದ್ಯೆಯೊಂದಿಗೆ ವಿನಯವೂ ಅತಿ ಮುಖ್ಯ. ವಿದ್ಯಾರ್ಥಿಗಳಿಗೆ ಗುರುವಿನೊಂದಿಗೆ ಗುರಿಯೂ ಇರಬೇಕು. ಇತ್ತೀಚೆಗೆ ವಿದ್ಯಾರ್ಥಿಗಳು ಹೆಚ್ಚಿಗೆ ಮೊಬೈಲ್ ಗೀಳು ಹಾಗೂ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಅದನ್ನು ಆದಷ್ಟು ಕಡಿಮೆ ಮಾಡಿ ಓದಿನತ್ತ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು. ಹಾಗೆಯೇ ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಶೆ.೧೦೦ ಫಲಿತಾಂಶ ಪಡೆದ ಕಾರಣ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರನ್ನು ಶ್ಲಾಘಿಸಿದರು. ಈ ಸಂದರ್ಭ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಾಲಾ ಅಭಿವೃದ್ದಿ ಸಮಿತಿಯ ಆಶಾ ಸುಬ್ಬಯ್ಯ ಸೇರಿದಂತೆ ಉಪ ಪ್ರಾಂಶುಪಾಲರು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಇದ್ದರು.