ಕುಶಾಲನಗರ, ಜೂ. ೪: ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಳೆಯ ವಿದ್ಯಾರ್ಥಿಗಳು ಚಿಂತನೆ ಹರಿಸ ಬೇಕಾಗಿದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದ್ದಾರೆ.
ಅವರು ಸುಂಟಿಕೊಪ್ಪ ಸಮೀಪದ ಗುಂಡುಗುಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಕಟ್ಟಡಕ್ಕೆ ಬಣ್ಣ ಬಳಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವರ್ಷ ಕಳೆದಂತೆ ಸರ್ಕಾರಿ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು ಮುಚ್ಚುವ ಆತಂಕದಲ್ಲಿದೆ. ಅಧಿಕ ಸಂಖ್ಯೆಯಲ್ಲಿ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸುವ ಜವಾಬ್ದಾರಿಯನ್ನು ಹಳೆಯ ವಿದ್ಯಾ ರ್ಥಿಗಳು ಜವಾಬ್ದಾರಿ ವಹಿಸಬೇಕಾ ಗಿದೆ. ಕನಿಷ್ಠ ೫ನೇ ತರಗತಿ ತನಕ ಕನ್ನಡ ಶಾಲೆಗಳಲ್ಲಿ ಓದುವ ಬಗ್ಗೆ ಪೋಷಕರು ತಮ್ಮ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಸರ್ಕಾರಿ ಕನ್ನಡ ಶಾಲೆಗಳ ಹಿಂದಿನ ವೈಭವ ಮರುಕಳಿಸುವಂತೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದರು.
ಯುವ ಬ್ರಿಗೇಡ್ ಮೂಲಕ ರಾಜ್ಯದಲ್ಲಿ ೩೫ ಸರ್ಕಾರಿ ಶಾಲೆಗಳನ್ನು ಗುರುತಿಸಿ ಕಟ್ಟಡಗಳಿಗೆ ಸುಣ್ಣ-ಬಣ್ಣ ಹೊಡೆಯುವುದು ಮತ್ತು ನಿರ್ವಹಣೆ ಮಾಡುವ ಕೆಲಸ ತಮ್ಮ ಕಾರ್ಯ ಕರ್ತರ ಮೂಲಕ ಎರಡು ದಿನಗಳ ಕಾಲ ನಡೆಯಲಿದೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು. ಇದೇ ಸಂದರ್ಭ ಸುಣ್ಣ ಬಣ್ಣ ಮತ್ತು ಇತರ ಸಲಕರಣೆಗಳನ್ನು ನೀಡಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಯುವ ಬ್ರಿಗೇಡ್ ರಾಜ್ಯ ಪ್ರಮುಖರಾದ ನಂಜನಗೂಡಿನ ಚಂದ್ರಶೇಖರ್ ಮತ್ತು ಕಾರ್ಯಕರ್ತರ ತಂಡ ಶಾಲೆಗೆ ಸುಣ್ಣ ಬಣ್ಣ ಬಳಿ ಯುವ ಕಾಯಕದಲ್ಲಿ ತೊಡಗಿಸಿ ಕೊಂಡಿದ್ದಾರೆ. ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯರು, ಸ್ಥಳೀಯ ಜನಪ್ರತಿನಿಧಿಗಳು ಶಾಲೆಯ ಹಳೆ ವಿದ್ಯಾರ್ಥಿಗಳು ಇದ್ದರು.