ವೀರಾಜಪೇಟೆ, ಮೇ ೨೯: ವೀರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಅವರಿಗೆ ಮಂತ್ರಿ ಸ್ಥಾನ ನೀಡಿ ಅವರನ್ನು ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕೆಂದು ಕೊಡಗು ಹೆಗ್ಗಡೆ ಅಭಿವೃದ್ಧಿ ಸಂಘ ಮತ್ತು ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಆಗ್ರಹಿಸಿದ್ದಾರೆ.

ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಳೆದ ೨೦ ವರ್ಷಗಳಿಂದ ಹೊರ ಜಿಲ್ಲೆಯವರೆ ಕೊಡಗಿನ ಉಸ್ತುವಾರಿ ಸಚಿವರಾಗುತ್ತಿದ್ದು ಜಿಲ್ಲೆಯಿಂದ ಶಾಸಕರಾಗಿ ಆಯ್ಕೆ ಆದವರಿಗೆ ಯಾವುದೇ ಸ್ಥಾನಮಾನ ನೀಡಲಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಕೆಲವು ತಿಂಗಳ ಕಾಲ ಮಾತ್ರ ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಜಿಲ್ಲೆಯವರಾದ ವೀರಾಜಪೇಟೆ ಶಾಸಕ ಪೊನ್ನಣ್ಣ ಅವರಿಗೆ ಮಂತ್ರಿಸ್ಥಾನ ನೀಡಿ ಅವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಿದರೆ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಕೊಡಗು ಜಿಲ್ಲಾ ಅಹಿಂದ ಒಕ್ಕೂಟದ ಅಧ್ಯಕ್ಷ ತೋರೆರ ಮುದ್ದಯ್ಯ ಮಾತನಾಡಿದರು. ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಜಮ್ಮಾ ಬಾಣೆ, ವನ್ಯಮೃಗಗಳ ಹಾವಳಿ, ಕೋವಿಯ ಹಕ್ಕು ಇತ್ಯಾದಿಗಳ ಬಗ್ಗೆ ಅರಿವಿರುವ ಶಾಸಕ ಎ.ಎಸ್ ಪೊನ್ನಣ್ಣ ಅವರನ್ನು ಮಂತ್ರಿ ಸ್ಥಾನ ನೀಡಿ ಅವರು ಉಸ್ತುವಾರಿ ಸಚಿವರನ್ನಾಗಿ ಮಾಡಿದರೆ ಅಭಿವೃದ್ಧಿಗೆ ಪೂಕವಾಗುತ್ತದೆ ಎಂದು ಹೇಳಿದರು.