ಸೋಮವಾರಪೇಟೆ, ಮೇ ೨೮: ರೋಗಿಗಳ ಜೀವ ಉಳಿಸುವ ನಿಟ್ಟಿನಲ್ಲಿ ಕೇವಲ ಕರ್ತವ್ಯ ಎಂದೆಣಿಸದೇ ಸೇವಾ ಮನೋಭಾವದೊಂದಿಗೆ ಕೆಲಸ ಮಾಡುವ ಆಂಬ್ಯುಲೆನ್ಸ್ ಚಾಲಕರ ಸೇವೆ ವರ್ಣನಾತೀತ ಎಂದು ಸುಂಟಿಕೊಪ್ಪ ಪೊಲೀಸ್ ಠಾಣೆಯ ಎಎಸ್‌ಐ ಶಿವಪ್ಪ ಅಭಿಪ್ರಾಯಿಸಿದರು.

ಸುಂಟಿಕೊಪ್ಪ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಿದ್ದ ಆಂಬ್ಯುಲೆನ್ಸ್ ಚಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತುರ್ತು ಸಂದರ್ಭ ಕ್ಷಿಪ್ರಗತಿಯಲ್ಲಿ ಸ್ಪಂದಿಸುವ ಚಾಲಕರು ತಮ್ಮ ಸೇವಾವಧಿಯಲ್ಲಿ ಸಾವಿರಾರು ಜೀವಗಳನ್ನು ಉಳಿಸುವ ಮಹತ್ಕಾರ್ಯ ಮಾಡುತ್ತಾರೆ. ಇವರುಗಳ ಸೇವೆ ಸದಾ ಸ್ಮರಣೀಯ ಎಂದರು.

ದಿನಾಚರಣೆ ಅಂಗವಾಗಿ ಕೇಕ್ ಕತ್ತರಿಸಿ ಚಾಲಕರಿಗೆ ಶುಭಾಶಯ ಕೋರಲಾಯಿತು. ಈ ಸಂದರ್ಭ ೧೦೮ ಆಂಬ್ಯುಲೆನ್ಸ್ ಸೇವೆಯ ಜಿಲ್ಲಾ ವ್ಯವಸ್ಥಾಪಕ ಸೋಮಶೇಖರ್, ಚಾಲಕರುಗಳಾದ ಅರುಣ್, ಯೋಗೇಶ್, ಸುನಿಲ್, ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.