ಮಡಿಕೇರಿ, ಮೇ ೨೬: ಹೆಸರೂ ಕೇಳುತ್ತಲೇ ಬಾಯಲ್ಲಿ ನೀರೂರುತ್ತದೆಯಲ್ಲವೇ...? ಇನ್ನೂ ಇಷ್ಟು, ಇನ್ನಷ್ಟು ರಾಶಿ ಹಣ್ಣುಗಳನ್ನು ಒಮ್ಮೆಲೆ ಸವಿಯುವಂತಾದರೆ ಇನ್ನೆಷ್ಟು ನೀರೂರಬಹುದು...? ಬಾಯಲ್ಲಿ ನೀರೂರಿಸುವ ತರಾವರಿ ಮಾವಿನ ಹಣ್ಣುಗಳು., ಹಲಸು., ಅವುಗಳ ಉತ್ಪನ್ನಗಳು., ಜೂಸ್‌ಗಳು ಒಂದೇ ಸೂರಿನಡಿಯಲ್ಲಿ ಮಿಳಿತಗೊಂಡಿವೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕಾ ಇಲಾಖೆ, ಕೊಡಗು ಜಿಲ್ಲಾ ಹಾಪ್‌ಕಾಮ್ಸ್ ಇವುಗಳ ಸಹಯೋಗದೊಂದಿಗೆ ಮಡಿಕೇರಿಯ ಹಾಪ್‌ಕಾಮ್ಸ್ ಆವರಣದಲ್ಲಿ ಏರ್ಪಡಿಸಲಾಗಿರುವ ‘ಮಾವು ಮತ್ತು ಹಲಸು ಮೇಳ’ದಲ್ಲಿ ಈ ರೀತಿಯ ವಿಧ - ವಿಧದ ಮಾವು ಹಾಗೂ ಹಲಸಿನ ಹಣ್ಣುಗಳನ್ನು ಸವಿಯಬಹುದಾಗಿದೆ. ಆವರಣದ ಒಳಹೊಕ್ಕುತ್ತಲೇ ವಿವಿಧೆಡೆಗಳಿಂದ ಬಂದಿರುವ ವಿವಿಧ ತಳಿಯ ಮಾಗಿದ ಹಣ್ಣುಗಳ ಸುವಾಸನೆ ಮೂಗಿಗೆ ರಾಚುತ್ತದೆ. ಬಣ್ಣ - ಬಣ್ಣದ ಹಣ್ಣುಗಳೊಂದಿಗೆ, ರುಚಿಯಾದ ಹಲಸು ಕೂಡ ಇದೆ. ಇದರೊಂದಿಗೆ ಹಲಸು ಹಾಗೂ ಮಾವಿನಿಂದ ಉತ್ಪಾದಿಸಿದ ತಿನಿಸಿಗಳು ಇವೆ.

ಇದರೊಂದಿಗೆ ಬಾಯಾರಿದವರ ದಣಿವಾರಿಸಲು ತಂಪಾದ ಮಾವಿನ ಜ್ಯೂಸ್ ತಾಜಾತನದಿಂದ ಸಿಗುತ್ತದೆ. ಇದರೊಂದಿಗೆ ಇದೇ ಮೊದಲ ಬಾರಿಗೆ ಉತ್ಕೃಷ್ಟ ತಳಿಯ ಮಾವು ಹಾಗೂ ಹಲಸಿನ ಹಣ್ಣಿನ ಗಿಡಗಳು ಕೂಡ ಈ ಮೇಳದಲ್ಲಿದೆ. ತಾ. ೨೮ರವರೆಗೆ ಈ ಮೇಳ ನಡೆಯಲಿದೆ.

ಮೇಳಕ್ಕೆ ಎ.ಎಸ್. ಪೊನ್ನಣ್ಣ ಚಾಲನೆ

‘ಮಾವು ಮತ್ತು ಹಲಸು ಮೇಳ’ಕ್ಕೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಚಾಲನೆ ನೀಡಿದರು. ಮಾವು ಮತ್ತು ಹಲಸು ಮೇಳದಿಂದ ರೈತರು ನೇರವಾಗಿ ತಾವು ಉತ್ಪಾದಿಸಿದ ಬೆಳೆಯನ್ನು ಮಾರಾಟ ಮಾಡಲು ಅನುಕೂಲವಾಗಿದೆ. ಜೊತೆಗೆ ಗ್ರಾಹಕರಿಗೂ ಸಹಕಾರಿಯಾಗಲಿದೆ. ರೈತರನ್ನು ಪ್ರೋತ್ಸಾಹಿಸಲು ಮತ್ತು ಉತ್ತೇಜಿಸಲು ಸಹಕಾರಿಯಾಗಿದೆ. ಜಿಲ್ಲಾಡಳಿತ ಉತ್ತಮ ಕೆಲಸ ಕೈಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ ಮಾವು ಮತ್ತು ಹಲಸು ಮೇಳದಲ್ಲಿ ೨೫ ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ರಾಮನಗರ ಜಿಲ್ಲೆಯಿಂದ ಹೆಚ್ಚಿನ ಮಾವು ಬೆಳೆಗಾರರು ಆಗಮಿಸಿದ್ದಾರೆ. ರುಚಿಯಾದ ಮಾವು ಮತ್ತು ಹಲಸು ಹಣ್ಣನ್ನು ಗ್ರಾಹಕರು ಸವಿಯುವಂತಾಗಬೇಕು. ಮೇಳದಿಂದ ರೈತರು ಮತ್ತು ಗ್ರಾಹಕರಿಗೆ ಅನುಕೂಲವಾಗಿದೆ ಎಂದು ಹೇಳಿದರು. ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಎಚ್.ಆರ್.ನಾಯಕ್, ಹಿರಿಯ ಸಹಾಯಕ ನಿರ್ದೇಶಕರಾದ ಸಿ.ಎಂ.ಪ್ರಮೋದ್ ಅವರು ವಿವಿಧ ರೀತಿಯ ಮಾವು ಮತ್ತು ಹಲಸು ಬಗ್ಗೆ ಮಾಹಿತಿ ನೀಡಿದರು.

ಮಾವು ಮತ್ತು ಹಲಸು ಮೇಳದಲ್ಲಿ ಬಾದಾಮಿ, ರಸಪುರಿ, ಸಿಂಧೂರ, ತೋತಾಪುರಿ, ದಾಶೇರಿ, ನೀಲಂ, ರುಮಾನಿ, ಅಮ್ರಪಾಲಿ, ಕೊಡಗಿನ ಕಾಡು ಮಾವು, ಮಲ್ಗೋವಾ, ಮಲ್ಲಿಕಾ, ಬಂಗಿನಪಲ್ಲಿ, ಪುತ್ತೂರಿನ ತೋಟಗಾರಿಕಾ ಇಲಾಖೆ ವತಿಯಿಂದ ವಿವಿಧ ಜಾತಿಯ ಮಾವಿನ ತಳಿಗಳಾದ ಮಲ್ಲಿಕಾ, ಕೇಸರ್, ಕಾಳಪಾಡಿ, ಮತ್ತಿತರ ಮಾವಿನ ಸಸಿಗಳನ್ನು ಮಾರಾಟ ಮಾಡಲಾಗುತ್ತಿದೆ. ರೈತರಿಗೆ ಸಾವಯವ ಕೃಷಿ ದೃಢೀಕರಣ ನೀಡುವ ಸಂಸ್ಥೆ ವತಿಯಿಂದ ಬೆಲ್ಲದ ಪುಡಿ ಹಾಗೂ ಅಚ್ಚು ಬೆಲ್ಲವನ್ನು ಮಾರಾಟ ಮಾಡಲಾಗುತ್ತಿದೆ.

ವಿಧಾನಪರಿಷತ್ ಸದಸ್ಯ ಸುಜಾಕುಶಾಲಪ್ಪ, ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಹಾಪ್ ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಹಾಪ್‌ಕಾಮ್ಸ್ ಉಪಾಧ್ಯಕ್ಷ ಮಲ್ಲಂಡ ಮಧುದೇವಯ್ಯ, ನಿರ್ದೇಶಕರಾದ ನಾಗೇಶ್ ಕುಂದಲ್ಪಾಡಿ, ಎಸ್.ಪಿ.ಪೊನ್ನಪ್ಪ, ಬೇಬಿ ಪೂವಯ್ಯ, ಲೀಲಾ ಮೇದಪ್ಪ, ಕೊನೇರಿರ ಎಂ.ಮನೋಹರ್, ಸುವಿನ್ ಗಣಪತಿ, ಮಹೇಶ್, ಕಾಂಗೀರ ಸತೀಶ್, ಇತರರು ಇದ್ದರು.