ಮಡಿಕೇರಿ, ಏ. ೩: ಭಾರತೀಯ ವಾಯುಪಡೆಯಲ್ಲಿ ಏರ್ಕಮಡೋರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೊಡಗಿನವರಾದ ಐಚೆಟ್ಟಿರ ಅಯ್ಯಪ್ಪ (ಪ್ರದೀಪ್) ಅವರು ಏರ್ವೈಸ್ ಮಾರ್ಷಲ್ ಹುದ್ದೆಗೆ ಪದೋನ್ನತಿ ಹೊಂದಿದ್ದಾರೆ. ಇದೀಗ ಅವರು ವಾಯುಪಡೆಯ ಕೇಂದ್ರ ಕಚೇರಿ ನವದೆಹಲಿಗೆ ನಿಯೋಜಿಸಲ್ಪಟ್ಟಿದ್ದಾರೆ.
ಕೊಡಗಿನವರಾದ ನಿವೃತ್ತ ಬ್ರಿಗೇಡಿಯರ್ ಐಚೆಟ್ಟಿರ ಕುಟ್ಟಪ್ಪ ಮತ್ತು ಸೀತಾ (ತಾಮನೆ : ಕೋದಂಡ) ಅವರ ಪುತ್ರರಾಗಿರುವ ಅಯ್ಯಪ್ಪ ಅವರು ಎನ್ಡಿಎ ವಿದ್ಯಾರ್ಥಿಯಾಗಿ ವಾಯುಪಡೆಯನ್ನು ಸೇರಿ ಮಿಗ್ ಫೈಟರ್ ಪೈಲಟ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ವಾಯುಸೇನಾ ಮೆಡಲ್ ಮತ್ತು ವಿಶಿಷ್ಟ ಸೇವಾ ಮೆಡಲ್ ಸೇವಾ ಪುರಸ್ಕಾರಗಳಿಗೆ ಪಾತ್ರರಾಗಿರುವ ಅಯ್ಯಪ್ಪ ಅವರು ವಾಯು ಸೇನೆಯಲ್ಲಿ ಉನ್ನತ ಹುದ್ದೆಗೇರುವ ಮೂಲಕ ಕೊಡಗಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಏರ್ವೈಸ್ ಮಾರ್ಷಲ್ ಆಗಿ ಐಚೆಟ್ಟಿರ ಅಯ್ಯಪ್ಪ
(ಮೊದಲ ಪುಟದಿಂದ) ವಿಶೇಷವೆಂದರೆ ಐಚೆಟ್ಟಿರ ಕುಟುಂಬದವರೇ ಆದ ಬೋಪಯ್ಯ ಉತ್ತಯ್ಯ ಅವರು ಭಾರತೀಯ ನೌಕಾಪಡೆಯಲ್ಲಿ ರಿಯರ್ ಎಡ್ಮಿರಲ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಭಾರತೀಯ ಭೂಸೇನೆಯಲ್ಲಿ ಮೇಜರ್ ಜನರಲ್ ಹುದ್ದೆಗೆ ಇವು ಎರಡು ಹುದ್ದೆ ಸರಿಸಮವಾಗಿದೆ. ಪ್ರಸ್ತುತ ಇವರುಗಳಲ್ಲದೆ ಭಾರತೀಯ ಭೂಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ಗಳಾಗಿ ಕೊಡಗಿನವರಾದ ಕೋದಂಡ.ಪಿ. ಕಾರ್ಯಪ್ಪ ಚೆನ್ನೀರ ಬನ್ಸಿ ಪೊನ್ನಪ್ಪ ಕರ್ತವ್ಯ ನಿರ್ವಹಿಸುತ್ತಿದ್ದಾರೆ.