ಚೆಯ್ಯಂಡಾಣೆ, ಮಾ ೨೬: ವಾಹನ ಚಾಲಕರು ಮತ್ತು ಮಾಲೀಕರು ತಮ್ಮ ವಾಹನಗಳಿಗೆ ಪಕ್ಕಾ ದಾಖಲಾತಿಗಳನ್ನು ಹೊಂದಿರ ಬೇಕೆಂದು ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಹೇಳಿದರು.

ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಕರೆಯಲಾಗಿದ್ದ ಆಟೋ ಚಾಲಕರ ಮತ್ತು ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ವಾಹನ ಚಲಾಯಿಸುವವರು ವಾಹನ ಚಾಲನಾ ಪರವಾನಗಿ, ವಾಹನದ ವಿಮೆ ಸೇರಿದಂತೆ ಎಲ್ಲಾ ದಾಖಲೆಗಳನ್ನು ಹೊಂದಿರಬೇಕು. ಇಲ್ಲದವರು ಒಂದು ವಾರದೊಳಗೆ ದಾಖಲೆಗಳನ್ನು ಸರಿಪಡಿಸಬೇಕು ಎಂದರು.

ನಗರದಲ್ಲಿ ಆಟೋ ನಿಲ್ದಾಣಕ್ಕೆ ಸ್ಥಳಾವಕಾಶ ಕಲ್ಪಿಸಿದ್ದರೂ ಅನಾವಶ್ಯಕವಾಗಿ ಆಟೋರಿಕ್ಷಾಗಳು ಪಟ್ಟಣದಲ್ಲಿ ಸುತ್ತಾಡಿ ವಾಹನ ದಟ್ಟಣೆಗೆ ಆಸ್ಪದವನ್ನು ನೀಡುತ್ತಿದ್ದು, ಅಂತವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದರು.

ನಾಪೋಕ್ಲು ವ್ಯಾಪ್ತಿಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟದ ಬಗ್ಗೆ, ಅಕ್ರಮ ಗಾಂಜಾ ಹಾಗೂ ಇನ್ನಿತರ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ, ಅಕ್ರಮ ಚಟುವಟಿಕೆ ಮಾಡುವವರ ಬಗ್ಗೆ ಮಾಹಿತಿ ನೀಡಿ ಉತ್ತಮ ಸಮಾಜಕ್ಕಾಗಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದರು.

ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದೆಂದು ಠಾಣಾಧಿಕಾರಿ ಮಂಜುನಾಥ್ ತಿಳಿಸಿದರು. ವಾಹನ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ರಝಾಕ್ ಮಾತನಾಡಿ, ಪಟ್ಟಣದಲ್ಲಿ ಈಗಾಗಲೇ ಆಟೋ ನಿಲ್ದಾಣಕ್ಕೆ ೧೨೦ ಮೀ, ಸ್ಥಳಾವಕಾಶವನ್ನು ನೀಡಿದ್ದು ಇಲ್ಲಿ ಖಾಸಗಿ ವಾಹನಗಳ ನಿಲುಗಡೆಯಿಂದ ತೊಂದರೆ ಯಾಗುತ್ತಿದೆ. ಪಟ್ಟಣದಲ್ಲಿ ಬಸ್‌ಗಳ ಗಂಟೆ ಗಟ್ಟಲೆ ನಿಲುಗಡೆಯಿಂದ ಹಾಗೂ ಅಂಗಡಿ ಮಾಲೀಕರು ತಮ್ಮ ವಾಹನಗಳನ್ನು ಅಂಗಡಿಗಳ ಮುಂದೆ ಬೆಳಿಗ್ಗೆಯಿಂದ ಸಂಜೆಯವರೆಗೆ ನಿಲ್ಲಿಸುವುದರಿಂದ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ವ್ಯಾಪ್ತಿಯಲ್ಲಿ ಕೆಲವು ಅಸ್ಸಾಂ ಕಾರ್ಮಿಕರ ದುರ್ವರ್ತನೆ ಹೆಚ್ಚಾಗಿದ್ದು ದಾಖಲಾತಿಗಳಿಲ್ಲದೆ ವಾಹನ ಚಲಾಯಿಸುತ್ತಿದ್ದಾರೆ. ಇದಕ್ಕೆ ಕೆಲವು ಮಾಲೀಕರು ಅವರಿಗೆ ಸಾಥ್ ನೀಡುತ್ತಿದ್ದಾರೆ ಎಂದು ದೂರಿದರು. ಅಲ್ಲದೆ ಸೋಮವಾರ ಗೂಡ್ಸ್ ವಾಹನಗಳಲ್ಲಿ ಜನರನ್ನು ಸಾಗಾಟ ಮಾಡಲಾಗುತ್ತಿದೆ ಇದರಿಂದ ಆಟೋ ಚಾಲಕರು ಬಾಡಿಗೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಸೋಮವಾರ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಮುಖ್ಯ ರಸ್ತೆಯಲ್ಲೇ ಅಂಗಡಿಗಳನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದು ಇದರಿಂದ ವಾಹನ ಸವಾರರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಝಾಕ್ ಒತ್ತಾಯಿಸಿ ಸಭೆಯಲ್ಲಿ ಗಮನ ಸೆಳೆದರು. ಇದಕ್ಕೆ ಇತರ ಆಟೋ ಚಾಲಕರು ಕೂಡ ಧ್ವನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಠಾಣಾಧಿಕಾರಿ ಮಂಜುನಾಥ್ ಮುಂದೆ ಬಸ್ ಮಾಲೀಕರ, ಚಾಲಕರ ಮತ್ತು ಪಟ್ಟಣದ ಅಂಗಡಿ ಮಾಲೀಕರ ಹಾಗೂ ಅಸ್ಸಾಂ ಕಾರ್ಮಿಕರನ್ನು ಹೊಂದಿರುವ ಮಾಲೀಕರ ಸಭೆಯನ್ನು ಕರೆಯಲಾಗುವುದು ತದನಂತರ ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದರು. ಪಟ್ಟಣದ ಆಟೋ ನಿಲ್ದಾಣ ಸೇರಿದಂತೆ ಇನ್ನಿತರ ವಾಹನ ನಿಲುಗಡೆ ನಿಷೇದಿತ ಕಡೆಗಳಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡಿದವರ ವಿರುದ್ಧ ದಂಡ ವಿಧಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಠಾಣಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದರು.

ಸಭೆಯಲ್ಲಿ ವಾಹನ ಚಾಲಕ ಮತ್ತು ಮಾಲೀಕರ ಸಂಘದ ಕಾರ್ಯದರ್ಶಿ ಝಕರಿಯ, ಮಹೇಶ್, ರೇಣುಕೇಶ, ವಿಜಯಕುಮಾರ್, ಸುಕುಮಾರ್, ಜಾಫರ್, ಹಂಸ, ಬಿದ್ದಪ್ಪ, ರಾಶಿದ್ ಹಾಗೂ ಆಟೋ ಚಾಲಕರ ಸಂಘದ ಸದಸ್ಯರು, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.