ಮಡಿಕೇರಿ, ಜ. ೧೩: ಕೊಡಗು ಜಿಲ್ಲೆಯಲ್ಲಿ ಶೀಘ್ರ ಜಿಲ್ಲಾಮಟ್ಟದ ತುಳು ಸಮ್ಮೇಳನವನ್ನು ನಡೆಸಲು ಎಲ್ಲಾ ತುಳು ಭಾಷಿಕ ಸಮುದಾಯದ ಪ್ರಮುಖರ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.

ತುಳುವೆರ ಜನಪದ ಕೂಟದ ಜಿಲ್ಲಾಧ್ಯಕ್ಷ ಬಿ.ಬಿ. ಐತ್ತಪ್ಪ ರೈ ಅವರ ಅಧ್ಯಕ್ಷತೆಯಲ್ಲಿ ನಗರದ ಬಾಲಭವನ ಸಭಾಂಗಣದಲ್ಲಿ ನಡೆದ ತುಳು ಸಮ್ಮೇಳನದ ಪೂರ್ವ ಸಿದ್ಧತಾ ಸಭೆಯಲ್ಲಿ ವಿವಿಧ ತುಳು ಭಾಷಿಕರ ಸಮುದಾಯದ ಪ್ರಮುಖರು ಹಾಗೂ ಕೂಟದ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಲಾಯಿತು.

ಸಮ್ಮೇಳನದಲ್ಲಿ ಆಕರ್ಷಣೀಯ ಸ್ತಬ್ಧಚಿತ್ರ, ತುಳುರಥ, ಮೆರವಣಿಗೆ, ವಿಚಾರಗೋಷ್ಠಿ ನಡೆಸಲು ವಿವಿಧ ಉಪ ಸಮಿತಿಗಳನ್ನು ರಚಿಸುವುದು ಮತ್ತು ಮುಖ್ಯ ಅತಿಥಿಗಳ ಭಾಗವಹಿಸುವಿಕೆ ಕುರಿತು ಚರ್ಚಿಸಲಾಯಿತು.

೧೫ ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯ ತುಳು ಬಾಂಧವರನ್ನು ಸೇರಿಸುವುದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಅವರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸುವುದು ಮತ್ತು ಮುಂದಿನ ಸಭೆಯಲ್ಲಿ ಸಮ್ಮೇಳನದ ದಿನಾಂಕ ಅಂತಿಮ ಗೊಳಿಸಲು ನಿರ್ಧರಿಸಲಾಯಿತು.

ಸಮ್ಮೇಳನದ ಯಶಸ್ಸಿಗೆ ಎಲ್ಲಾ ತುಳು ಭಾಷಿಕ ಸಮುದಾಯ ಒಗ್ಗಟ್ಟಾಗಿ ಶ್ರಮಿಸುವ ಕುರಿತು ಸಭೆಯಲ್ಲಿ ಭರವಸೆ ದೊರೆಯಿತು. ತುಳುವೆರ ಜನಪದ ಕೂಟದ ಜಿಲ್ಲಾ ಉಪಾಧ್ಯಕ್ಷ ಆನಂದ ರಘು, ಗೌರವಾಧ್ಯಕ್ಷ ಶೇಖರ್ ಭಂಡಾರಿ, ಸಂಘಟನಾ ಕಾರ್ಯದರ್ಶಿ ರಾಜೀವ್ ಲೋಚನ ಹಾಗೂ ಖಜಾಂಚಿ ಪ್ರಭು ರೈ, ಮಡಿಕೇರಿ ತಾಲೂಕು ಅಧ್ಯಕ್ಷ ಸುರೇಶ್ ಕುಲಾಲ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಪ್ರಶಾಂತ್, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ವಿಜಯಲಕ್ಷಿö್ಮ ರವಿಶೆಟ್ಟಿ, ನಿರ್ದೇಶಕರುಗಳಾದ ಲೀಲಾ ಶೇಷಮ್ಮ, ಪ್ರಕಾಶ್ ಆಚಾರ್ಯ, ಬಿ.ಕೆ. ಅರುಣ್ ಕುಮಾರ್, ಅಶೋಕ್ ಆಚಾರ್ಯ, ಸಾವಿತ್ರಿ, ಲೋಹಿತ್, ವಿನೋದ್ ಪೂಜಾರಿ, ಗಿರೀಶ್ ರೈ ಹಾಗೂ ವಿವಿಧ ಸಮುದಾಯಗಳ ಪ್ರಮುಖರಾದ ಪಿ.ಕೆ. ದಿನೇಶ್, ಸೋಮಪ್ಪ, ಅರುಣ್ ಕುಮಾರ್ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದು ಸಮ್ಮೇಳನದ ಯಶಸ್ಸಿಗಾಗಿ ಸಲಹೆಗಳನ್ನು ನೀಡಿದರು.

ದಿನೇಶ್ ಪ್ರಾರ್ಥಿಸಿ, ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ ನಿರೂಪಿಸಿ, ವಂದಿಸಿದರು.