ಶಾಸಕ ಬೋಪಯ್ಯ

ವೀರಾಜಪೇಟೆ, ಜ. ೩: ವೀರಾಜಪೇಟೆ ಪುರಸಭೆ ವ್ಯಾಪ್ತಿಯ ರಸ್ತೆ ಡಾಂಬರಿಕರಣ, ಚರಂಡಿ ಮತ್ತು ಕಾಂಕ್ರೀಟ್ ರಸ್ತೆ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳಿಗಾಗಿ ರೂ. ೩.೫ ಕೋಟಿ ಅನುದಾನದಲ್ಲಿ ಕಾಮಗಾರಿ ಮುಗಿಯುವ ಹಂತದಲ್ಲಿದೆ. ನಗರದ ಜನತೆಗೆ ಕುಡಿಯುವ ನೀರು ಪೂರೈಕೆಗಾಗಿ ರೂ. ೬೫ ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ರೂ. ೨೫ ಲಕ್ಷ ಅನುದಾನದಲ್ಲಿ ವೀರಾಜಪೇಟೆಯ ಸುಂಕದಕಟ್ಟೆ ಕೊಳಚೆ ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಈಗಾಗಲೇ ನಗರದ ಎಲ್ಲಾ ಮನೆ ಮನೆಗಳಿಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದ್ದರು ಮುಂದೆಯು ಕುಡಿಯುವ ನೀರಿನ ಸೌಲಭ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ರೂ. ೬೫ ಕೋಟಿ ಅನುದಾನ ಮಂಜೂರು ಮಾಡಲಾಗಿದ್ದು, ಮುಂದಿನ ದಿನದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದ ಶಾಸಕ ಬೋಪಯ್ಯ ಅವರು, ಸರಕಾರದ ಅನುದಾನದಲ್ಲಿ ನಡೆಯುವ ಕಾಮಗಾರಿಗಳು ಕಳಪೆಯಾಗದಂತೆ ಸ್ಥಳೀಯರು ಗಮನ ಹರಿಸಬೇಕು ಹಾಗೂ ಗುತ್ತಿಗೆದಾರರು ಸಮಯಕ್ಕೆ ಸರಿಯಾಗಿ ಕಾಮಗಾರಿಯನ್ನು ಮುಗಿಸುವಂತಾಗಬೇಕು ಎಂದರು.

ಭೂಮಿಪೂಜೆ ಸಂದರ್ಭ ಪುರಸಭೆ ಅಧ್ಯಕ್ಷೆ ಸುಸ್ಮಿತಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಯಶೋದ, ಮುಖ್ಯಾಧಿಕಾರಿ ಚಂದ್ರಕುಮಾರ್, ಕೊಳಗೇರಿ ಅಭಿವೃದ್ಧಿ ಮಂಡಳಿ ಅಭಿಯಂತರರಾದ ತೇಜಸ್ವಿನಿ, ಜವಹಾರ್ ಜೋಗಿ, ಪುರಸಭೆ ಸದಸ್ಯರಾದ ಜೂನಾ, ಆಶಾ ಸುಬ್ಬಯ್ಯ, ತಸ್ನಿಂ ಅಕ್ತರ್, ಮಹದೇವ, ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ರಘು ನಾಣಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಶಿ ಸುಬ್ರಮಣಿ, ಮಧು ದೇವಯ್ಯ, ಸಂಪಿ ಪೂಣಚ್ಚ ಉಪಸ್ಥಿತರಿದ್ದರು.