ಶನಿವಾರಸಂತೆ, ಡಿ. ೨೯: ಸಮೀಪದ ಕೊಡ್ಲಿಪೇಟೆ ಹೋಬಳಿಯ ನೀರುಗುಂದ ಗ್ರಾಮದ ರೈತ ಎನ್.ಯು. ರುದ್ರಪ್ಪ (೫೭) ಎಂಬವರು ಭತ್ತದ ಗದ್ದೆಯ ಪಕ್ಕದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ.

ರುದ್ರಪ್ಪ ಭತ್ತದ ಬೆಳೆ ಬೆಳೆದಿದ್ದು, ಗ್ರಾಮದ ಕರುಣಾಕರ ಎಂಬಾತ ಇವರ ಗದ್ದೆಗೆ ಬಂದು ಕೊಟ್ಟಿದ್ದ ಹಣದ ವಿಷಯವಾಗಿ ಜಗಳ ತೆಗೆದು ಭತ್ತದ ತೆನೆ ಕಟಾವು ಮಾಡಲು ಯತ್ನಿಸಿದ. ಗಲಾಟೆ ನಡೆದಾಗ ಕರುಣಾಕರ ಕೆಲ ಹುಡುಗರನ್ನು ಕರೆಸಿ ರುದ್ರಪ್ಪರ ಮೇಲೆ ಹಲ್ಲೆಗೆ ಮುಂದಾದರು. ಕೆಲ ಗದ್ದೆಯ ಬೆಳೆಯನ್ನು ಬಲತ್ಕಾರದಿಂದ ಕಟಾವು ಮಾಡಿದ್ದರು ಎನ್ನಲಾಗಿದೆ.

ಇದರಿಂದ ಅವಮಾನ ತಾಳಲಾರದೆ ರುದ್ರಪ್ಪ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಸಹೋದರ ಎನ್.ಯು. ತ್ಯಾಗರಾಜ್ ಪೊಲೀಸರಿಗೆ ದೂರು ನೀಡಿದ್ದಾರೆ.

ಕೊಡ್ಲಿಪೇಟೆ ಉಪ ಪೊಲೀಸ್ ಠಾಣೆಯ ಸಿಬ್ಬಂದಿ ಮುಂದಿನ ಕ್ರಮಕೈಗೊಂಡಿದ್ದಾರೆ.