ಮಡಿಕೇರಿ, ಸೆ. ೧೬: ಕಡಗದಾಳು ಗ್ರಾಮದ ಪ್ರೌಢಶಾಲಾ ಶಿಕ್ಷಕರಿಗೆ ಹತ್ತನೇ ತರಗತಿಯಲ್ಲಿ ಶಾಲೆಯು ಸತತವಾಗಿ ಶೇಕಡ ೧೦೦ರ ಫಲಿತಾಂಶ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಾಧನೆಯ ಹಿಂದಿರುವ ಶಿಕ್ಷಕ ವೃಂದವನ್ನು ಕೊಡಗು ದಸಂಸ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ದ.ಸಂ. ಸಮಿತಿಯ ಮಡಿಕೇರಿ ಜಿಲ್ಲಾ ಸಂಚಾಲಕ ದಿವಾಕರ್ ಹೆಚ್.ಎಲ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘಟನೆಯು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಕಳೆದ ಮೂರು ದಶಕಗಳಿಂದ ಹಾಗೂ ಸರ್ಕಾರಿ ಶಾಲೆಯಲ್ಲಿ ಶೇ.ನೂರು ಫಲಿತಾಂಶ ಬಂದAತಹ ಶಾಲಾ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಮಾಡುತ್ತಾ ಬಂದಿದ್ದು, ಮಡಿಕೇರಿ ನಗರಸಭೆಗೆ ಒಳಪಟ್ಟ ಮೂರು ಪ್ರಾಥಮಿಕ ಶಾಲೆಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವನ್ನೂ ಹತ್ತು ವರ್ಷಗಳಿಂದ ನೀಡುತ್ತಾ ಬಂದಿದೆ. ಕೆಲ ವರ್ಷಗಳಿಂದ ಪದವಿ ವಿದ್ಯಾರ್ಥಿಗಳಿಗೆ ಐಎಎಸ್ ಮತ್ತು ಐಪಿಎಸ್ ತರಬೇತಿ ಶಿಬಿರ ಏರ್ಪಡಿಸುತ್ತಿದ್ದು, ಎಲ್ಲಾ ಕಾರ್ಯಕ್ರಮಗಳ ಮುಖ್ಯ ಉದ್ದೇಶ ಶಿಕ್ಷಣದ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣ ಮಾಡುವುದಾಗಿದೆ ಎಂದರು.
ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಸಮಾಜ ಸೇವಕ ವಾಸು ದಲಿತ ಸಂಘರ್ಷ ಸಮಿತಿ ಬಹಳಷ್ಟು ವರ್ಷಗಳಿಂದ ಇಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಸರ್ಕಾರಿ ಶಾಲೆಯಲ್ಲಿ ಸಿಗುವ ಶಿಕ್ಷಣ ಉತ್ತಮವಾಗಿರುತ್ತದೆಯಲ್ಲದೆ, ಇಲ್ಲಿನ ಶಿಕ್ಷಕರು ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾರೆ ಎಂದರು.
ಮತ್ತೋರ್ವ ಅತಿಥಿಯಾಗಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಅಂಬೆಕಲ್ಲು ನವೀನ ಮಾತನಾಡಿ ಉತ್ತಮ ಸಮಾಜದ ನಿರ್ಮಾಣದ ಸಲುವಾಗಿ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಧಾರೆ ಎರೆಯುತ್ತಿರುವ ಶಿಕ್ಷಕರನ್ನು ಸನ್ಮಾನಿಸುವ ಕಾರ್ಯಕ್ರಮಗಳನ್ನು ದಲಿತ ಸಂಘರ್ಷ ಸಮಿತಿಯ ಹೊರತಾಗಿ ಬೇರೆ ಯಾವ ಸಂಘಟನೆಯೂ ಮಾಡುತ್ತಿಲ್ಲ, ಇಂತಹ ಕಾರ್ಯ್ರಮಗಳು ಹೆಚ್ಚು ನಡೆಯಬೇಕೆಂದರು.
ಮತ್ತೋರ್ವ ಅತಿಥಿ ಬೊಟ್ಲಪ್ಪ ಯುವಕ ಸಂಘದ ಸ್ಥಾಪಕಾಧ್ಯಕ್ಷ ಜೋಯಪ್ಪ ಮಾತನಾಡಿ, ಸಮಾಜದಲ್ಲಿ ವಿದ್ಯೆ, ಗೌರವ ಪಡೆದುಕೊಳ್ಳುವುದು ಬಹಳ ಕಷ್ಟ, ವಿದ್ಯೆಯನ್ನು ಕಸಿದುಕೊಳ್ಳುವುದು ಕಷ್ಟ, ಆದರೆ ದಾನ ಮಾಡಬಹುದು ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕಡಗದಾಳು ಪಂಚಾಯತ್ ಅಧ್ಯಕ್ಷ ಬಿ.ಟಿ ಜಯಣ್ಣ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಸಿರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೇಲುಸ್ವಾಮಿ, ಮುಖ್ಯಶಿಕ್ಷಕಿ ಗಂಗಮ್ಮ ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು.