ಮಡಿಕೇರಿ, ಸೆ. ೬: ಪದವಿ ಎಂಬುದು ವಿದ್ಯಾರ್ಥಿ ಜೀವನದ ಅತಿ ಮುಖ್ಯ ಘಟ್ಟ. ಅದನ್ನು ಪೂರೈಸಿ ಮುಂದೆ ಸಾಗುತ್ತಿರುವ ವಿದ್ಯಾರ್ಥಿಗಳಾದ ತಾವೆಲ್ಲರೂ ಬದುಕಿನಲ್ಲಿ ಮಹತ್ತರ ಗುರಿಗಳನ್ನಿಟ್ಟುಕೊಂಡು ಮುನ್ನಡೆಯಬೇಕು. ಗುರಿಗೆ ತಕ್ಕ ಶ್ರಮ, ಶ್ರದ್ಧೆ ಮತ್ತು ಬದ್ಧತೆ ಇದ್ದಲ್ಲಿ ಯಶಸ್ಸು ಖಚಿತ. ಮಹತ್ಕಾರ್ಯವನ್ನು ಸಾಧಿಸಿ, ಸಮಾಜಕ್ಕೆ ಉಪಯುಕ್ತರಾಗಿ ಬಾಳಿರಿ ಎಂದು ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ.ಎಂ.ಪ್ರವೀಣ್ ಕುಮಾರ್ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ೨೦೨೧-೨೨ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿಗಳ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಹೆಚ್.ಎನ್. ರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಂತರಿಕ ಗುಣಮಟ್ಟ ಖಾತ್ರಿ ಕೋಶದ ಸಂಚಾಲಕ ಪ್ರೊ. ಎಂ.ಎಸ್. ಶಿವಮೂರ್ತಿ ಮಾತನಾಡಿ, ಸಮಯ ವ್ಯರ್ಥ ಮಾಡದೇ ಪ್ರತಿ ಕ್ಷಣವನ್ನೂ ಸದುಪಯೋಗ ಮಾಡಿಕೊಳ್ಳಿರಿ. ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ ಎಂದು ಕಿವಿಮಾತು ಹೇಳಿದರು.

ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಪ್ರೊ. ಕೆ.ಹೆಚ್. ಧನಲಕ್ಷಿö್ಮ ಅವರು ಮಾತನಾಡಿ ‘ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಕೇವಲ ಪದವಿ ಪಡೆದುಕೊಂಡಿದ್ದರೆ ಮಾತ್ರ ಸಾಲುವುದಿಲ್ಲ. ಪ್ರತಿ ದಿನದ ಆಗು ಹೋಗುಗಳನ್ನು ಗಮನಿಸಿಕೊಳ್ಳುತ್ತ, ಪ್ರತಿ ದಿನದ ಹೊಸತನಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತಾಗಬೇಕು. ಇದರಿಂದ ಯಶಸ್ಸು ಸಾಧ್ಯ’ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.