ಮಡಿಕೇರಿ, ಆ. ೧೯: ವಿಶ್ವ ಛಾಯಾಗ್ರ‍್ರಹಣ ದಿನಾಚರಣೆ ಪ್ರಯುಕ್ತ ವನ್ಯಜೀವಿಗಳ ಬದುಕಿನ ಚಿತ್ರಣದ ಬಗ್ಗೆ ಕೊಡಗು ಪ್ರೆಸ್ ಕ್ಲಬ್ ಆಯೋಜಿಸಿದ್ದ ಉತ್ತಮ ಛಾಯಾಚಿತ್ರ ಸ್ಪರ್ಧೆಯಲ್ಲಿ ಶಕ್ತಿ ಪತ್ರಿಕೆಯ ಪುತ್ತರಿರ ಕರುಣ್ ಕಾಳಯ್ಯ ಹಾಗೂ ಉತ್ತಮ ವೀಡಿಯೋಗ್ರಫಿ ಸ್ಪರ್ಧೆಯಲ್ಲಿ ಚಿತ್ತಾರ ವಾಹಿನಿಯ ಸಂತೋಷ್ ರೈ ಬಹುಮಾನ ಪಡೆದುಕೊಂಡಿದ್ದಾರೆ.

ಲಾಲಿ ಪೆಟಲ್ಸ್ ಹೊಟೇಲ್ ಸಭಾಂಗಣದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಆಯೋಜಿಸಲಾಗಿತ್ತು. ಕೊಡಗು ಪ್ರೆಸ್ ಕ್ಲಬ್ ಸದಸ್ಯರಿಗೆ ಉತ್ತಮ ಛಾಯಾಚಿತ್ರ ಮತ್ತು ಉತ್ತಮ ವೀಡಿಯೋಗ್ರಫಿ ಸ್ಪರ್ಧೆ ಆಯೋಜಿಸಲಾಗಿತ್ತು. ಕರುಣ್ ಕಾಳಯ್ಯ ತೆಗೆದ ಬಸವನಹುಳುವಿನ ಛಾಯಾಚಿತ್ರ ಹಾಗೂ ಸಂತೋಷ್ ರೈ ಚಿತ್ರೀಕರಿಸಿದ ಕೆಂಪು ಇರುವೆ ಬದುಕಿನ ಚಿತ್ರಣ ಉತ್ತಮ ವೀಡಿಯೋಗ್ರಫಿಗೆ ಆಯ್ಕೆಯಾಗಿದೆ. ವೀರಾಜಪೇಟೆಯ ಹಿರಿಯ ಛಾಯಾಗ್ರಾಹಕ ಶ್ರೀಕಾಂತ್ ರಾವ್ ತೀರ್ಪುಗಾರರಾಗಿ

(ಮೊದಲ ಪುಟದಿಂದ) ಜವಾಬ್ದಾರಿ ನಿರ್ವಹಿಸಿದರು. ವಿಜೇತರಾದವರಿಗೆ ಉದ್ಯಮಿ ಮಾರ್ಟಿನ್ ತಲಾ ರೂ. ೫ ಸಾವಿರ ನಗದು ಹಾಗೂ ಕ್ಯಾಮರಾ ಬ್ಯಾಗ್ ಬಹುಮಾನವಾಗಿ ನೀಡಿದರು.

ಫೋಟೋ ತೆಗೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಸಾವಿರ ಪದದಲ್ಲಿ ಹೇಳಲು ಸಾಧ್ಯವಾಗದ್ದನ್ನು ಒಂದು ಫೋಟೋ ಹೇಳುತ್ತದೆ. ಪತ್ರಕರ್ತರು ಕೂಡ ಉತ್ತಮ ಛಾಯಾಗ್ರಾಹಕ ರಾಗಿದ್ದಾರೆ. ಬದುಕಿನ ಬಣ್ಣವನ್ನು ಚಿತ್ರ ಬಿಂಬಿಸುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ವಕೀಲ ಡಾ.ಯಾಲದಾಳು ಮನೋಜ್ ಬೋಪಯ್ಯ, ಛಾಯಾಗ್ರಾಹಕರಲ್ಲಿ ಸಾಮಾಜಿಕ ಜವಾಬ್ದಾರಿ ಹೆಚ್ಚಿರುತ್ತದೆ. ಫೋಟೋ ಮತ್ತು ವೀಡಿಯೋಗಳು ಸಮಾಜದಲ್ಲಿ ನಡೆಯುವ ವಿದ್ಯಮಾನದ ಸಾಕ್ಷಿಯಾಗಿ ಉಳಿಯುತ್ತದೆ ಎಂದು ಹೇಳಿದರು. ಬರಗಾಲದಲ್ಲಿ ಸೂಡಾನ್ ದೇಶದಲ್ಲಿ ಹಸಿವಿನ ಭೀಕರತೆ ಬಿಂಬಿಸುವ ಮಗು ಮತ್ತು ರಣಹದ್ದಿನ ಚಿತ್ರ ಇಂದಿಗೂ ಚರ್ಚೆಯಲ್ಲಿದೆ. ವಿವಾದಿತ ಛಾಯಾಗ್ರಾಹಕ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ, ಆ ದೇಶದ ಬಡತನದ ಚಿತ್ರಣವನ್ನು ವಿಶ್ವಕ್ಕೆ ಪರಿಚಯಿಸಿದ ಎಂದರು.

ಛಾಯಾಗ್ರಹಣದ ಬಗ್ಗೆ ಆಸಕ್ತಿ ಇರುವವರು ಉತ್ತಮ ಚಿತ್ರ ಸೆರೆಹಿಡಿಯಲು ದಿನಗಟ್ಟಲೆ ಕಾಡುಮೇಡು, ಬೆಟ್ಟಗುಡ್ಡದಲ್ಲಿ ಅಲೆದಾಡುತ್ತಾರೆ. ಮಾಧ್ಯಮ ಕ್ಷೇತ್ರದಲ್ಲಿಯೂ ಪರಿಣಾಮಕಾರಿ ಛಾಯಾಗ್ರಾಹಕರು ಇದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉದ್ಯಮಿ ಅಂಬೆಕಲ್ ನವೀನ್ ಕುಶಾಲಪ್ಪ ಮಾತನಾಡಿ, ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರು ಛಾಯಾಗ್ರಾಹಕರಾಗಿದ್ದಾರೆ. ಫೋಟೋಕ್ಕೆ ನೀಡುವ ನಗು ಜೀವನದಲ್ಲಿ ಶಾಶ್ವತವಾಗಿ ಇರಬೇಕೆಂದರು. ಕಾರ್ಯಕ್ರಮದ ಸಂಚಾಲಕ ಕುಡಿಯರ ದಿವಾಕರ ಬೋಜಪ್ಪ ಮಾತನಾಡಿ, ಛಾಯಾಗ್ರಾಹಕರ ಒತ್ತಾಸೆಯಂತೆ ನಂದ ಗುಜ್ಜರ್ ಹಾಗೂ ಜೀವನ್ ಪಾಲೆಕ್ಕಾಡ್ ಸ್ಮರಣಾರ್ಥ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

೧೮ನೇ ಶತಮಾನದಲ್ಲಿ ಮಡಿಕೇರಿ ಹಾಗೂ ಕೊಡಗಿನ ಮೂಲ ನಿವಾಸಿಗಳ ಬಗ್ಗೆ ತೆಗೆದ ಛಾಯಾ ಚಿತ್ರವನ್ನು ಹಿರಿಯ ಛಾಯಾಗ್ರಾಹಕ ರಾಜ್ ಮುತ್ತಪ್ಪ ಪ್ರದರ್ಶಿಸಿದರು. ವೀಡಿಯೋಗ್ರಫಿ ಮತ್ತು ಫೋಟೋಗ್ರಫಿ ಸ್ಪರ್ಧೆಗೆ ಬಂದ ವೀಡಿಯೋಗ್ರಫಿ ಮತ್ತು ಛಾಯಾಚಿತ್ರದ ಸಾಧಕ - ಬಾಧಕ ಕುರಿತು ವೀರಾಜಪೇಟೆಯ ಹಿರಿಯ ಛಾಯಾಗ್ರಾಹಕ ಶ್ರೀಕಾಂತ್ ರಾವ್ ವಿಶ್ಲೇಷಿಸಿದರು.

ಸರಿಯಾದ ಹೆಜ್ಜೆ ಮತ್ತು ಕೈ ಇಡುವ ಸ್ಪರ್ಧೆಯಲ್ಲಿ ಪ್ರಸಿನ್ ಗೌಡ ಪ್ರಥಮ, ಗೋಪಾಲ್ ಸೋಮಯ್ಯ ದ್ವಿತೀಯ ಹಾಗೂ ಬೊಳ್ಳಜೀರ ಬಿ. ಅಯ್ಯಪ್ಪ ತೃತೀಯ ಬಹುಮಾನ ಪಡೆದರು. ಬಲೂನ್ ಒಡೆಯುವ ಸ್ಪರ್ಧೆಯಲ್ಲಿ ಗೋಪಾಲ್ ಸೋಮಯ್ಯ ಪ್ರಥಮ, ಸುರ್ಜಿತ್ ದ್ವಿತೀಯ ಹಾಗೂ ಜೀವನ್ ತೃತೀಯ ಬಹುಮಾನ ಪಡೆದರು. ವಿಜೇತರಿಗೆ ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಚೀಯಂಡಿ ತೇಜಸ್ ಪಾಪಯ್ಯ ನಗದು ಬಹುಮಾನ ನೀಡಿದರು.

ಜೀವನ್ ಪಾಲೆಕ್ಕಾಡ್ ಅವರ ತಾಯಿ ಮಾಂಗಲ್ಯ ಅವರಿಗೆ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ರೂ.೫ ಸಾವಿರ ಆರ್ಥಿಕ ನೆರವು ನೀಡಲಾಯಿತು. ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಕೆ.ಕೆ. ರೆಜಿತ್‌ಕುಮಾರ್ ಗುಹ್ಯ, ಸಂಘಟನಾ ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್, ನಿರ್ದೇಶಕ ಸುನಿಲ್ ಪೊನ್ನೆಟಿ, ನವೀನ್ ಡಿಸೋಜ, ವಿಶ್ವ ಕುಂಬೂರು ಮತ್ತಿತರರು ಇದ್ದರು.