ಮಡಿಕೇರಿ, ಜೂ. ೧೯: ಅಕ್ರಮ ಸಕ್ರಮ ಯೋಜನೆಯಡಿ ಮೂವರಿಗೆ ಸಾಗುವಳಿ ಚೀಟಿ ಹಾಗೂ ೯೪ಸಿ ರಡಿ ೨೦ ಮಂದಿಗೆ ಮನೆ ನಿರ್ಮಾಣಕ್ಕೆ ಹಕ್ಕುಪತ್ರವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ವಿತರಿಸಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಮಡಿಕೇರಿ ಹೋಬಳಿಯ ಅರ್ಹರಿಗೆ ಮನೆ ಹಕ್ಕುಪತ್ರ ಹಾಗೂ ಸಾಗುವಳಿ ಚೀಟಿ ವಿತರಿಸಿದರು.
ಬಳಿಕ ಮಾತನಾಡಿದ ಶಾಸಕರು ಭೂಮಿ ಹಕ್ಕುಪತ್ರವನ್ನು ಯಾವುದೇ ಕಾರಣಕ್ಕೂ ಮಾರಿಕೊಳ್ಳಬಾರದು. ಸರ್ಕಾರದ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳುವತ್ತ ಗಮನಹರಿಸಬೇಕು ಎಂದು ಶಾಸಕರು ಸಲಹೆ ಮಾಡಿದರು.
ಭೂಮಿ ಮಾರಿಕೊಂಡಲ್ಲಿ ಪೈಸಾರಿ ಜಾಗ ಎಂದು ಪ್ರಕಟಿಸಬೇಕಾಗುತ್ತದೆ. ಆದ್ದರಿಂದ ಯಾರೂ ಸಹ ಸಾಗುವಳಿ ಚೀಟಿ ಅಥವಾ ಹಕ್ಕುಪತ್ರ ಮಾರಿಕೊಳ್ಳಬಾರದು ಎಂದು ಎಂ.ಪಿ. ಅಪ್ಪಚ್ಚು ರಂಜನ್ ಅವರು ಸಲಹೆ ಮಾಡಿದರು.
ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರಾದ ಎಂ.ಎಸ್. ಕುಮಾರಪ್ಪ, ಸುಮಾ ಸುದೀಪ್, ಡಿ.ಆರ್. ಕೆಂಚೇಶ್ವರ್, ತಹಶೀಲ್ದಾರ್ ಪಿ.ಎಸ್. ಮಹೇಶ್, ಶಿರಸ್ತೆದಾರ್ ಗುರುರಾಜ್ ಇತರರು ಇದ್ದರು.