ಮಡಿಕೇರಿ, ಏ. ೩: ಕೊಡಗು ಗೌಡ ಸಮಾಜದ ವಾರ್ಷಿಕ ಮಹಾಸಭೆ ಅಧ್ಯಕ್ಷ ಪೇರಿಯನ ಜಯಾನಂದ ಅವರ ಅಧ್ಯಕ್ಷತೆಯಲ್ಲಿ ನಗರದಲ್ಲಿ ನಡೆಯಿತು. ಪ್ರಸ್ತುತ ಇರುವ ಆಡಳಿತ ಮಂಡಳಿಗೆ ಮುಂದಿನ ೩ ವರ್ಷಗಳ ಅವಧಿಗೆ ಅಧಿಕಾರವನ್ನು ಒಮ್ಮತದಿಂದ ನೀಡಲಾಯಿತು.
ನಗರದ ನೂತನ ಗೌಡ ಸಮಾಜ ಸಭಾಂಗಣದಲ್ಲಿ ನಡೆದ ೨೦೧೯-೨೦ ಮತ್ತು ೨೦೨೦-೨೧ನೇ ಸಾಲಿನ ಮಹಾಸಭೆಯಲ್ಲಿ ಆಡಳಿತ ಮಂಡಳಿಯ ಕಾರ್ಯವೈಖರಿಯನ್ನು ಶ್ಲಾಘಿಸಲಾಯಿತು. ಯಾವುದೇ ಚುನಾವಣಾ ಪ್ರಕ್ರಿಯೆಯನ್ನು ನಡೆಸದೆ ಈಗ ಇರುವ ಆಡಳಿತ ಮಂಡಳಿಯನ್ನೇ ಮುಂದಿನ ಮೂರು ವರ್ಷಗಳವರೆಗೆ ಮುಂದುವರೆಸಲು ಸಭೆ ನಿರ್ಣಯ ಕೈಗೊಂಡಿತು.
ಸಭೆಯಲ್ಲಿ ಎರಡು ವರ್ಷಗಳ ಲೆಕ್ಕಪತ್ರದ ವರದಿಯನ್ನು ಮಂಡಿಸಿ ಅಂಗೀಕರಿಸಲಾಯಿತು. ಗೌಡ ಸಮಾಜದ ನೂತನ ಕಟ್ಟಡ ನಿರ್ಮಾಣದ ಕುರಿತು ಉಪಾಧ್ಯಕ್ಷ ಸೂರ್ತಲೆ ಆರ್. ಸೋಮಣ್ಣ ಅವರು ಸಂಪೂರ್ಣ ವರದಿಯನ್ನು ಸಭೆಗೆ ನೀಡಿದರು.
ಪೇರಿಯನ ಜಯಾನಂದ ಸ್ವಾಗತಿಸಿ, ನಿರ್ದೇಶಕ ಉಳುವಾರನ ಅಮೃತ ಸುರೇಶ್ ವಂದಿಸಿದರು. ಕೋಳುಮುಡಿಯನ ಆರ್. ಅನಂತಕುಮಾರ್ ವರದಿ ವಾಚಿಸಿದರು.
ಖಜಾಂಚಿ ಕುಯ್ಯಮುಡಿ ಕೆ. ವಸಂತ, ನಿರ್ದೇಶಕರುಗಳಾದ ಕೂಡಕಂಡಿ ಕಾವೇರಮ್ಮ ಸೋಮಣ್ಣ, ಪೊನ್ನಚ್ಚನ ಎಸ್. ಮಧುಸೂದನ್, ದಂಬೆಕೋಡಿ ಎಸ್. ಆನಂದ, ಪೈಕೇರ ಮನೋಹರ್ ಮಾದಪ್ಪ, ನಾಮ ನಿರ್ದೇಶಕರುಗಳಾದ ಕುಯ್ಯಮುಡಿ ಕೆ. ಪೂರ್ಣಯ್ಯ, ಹುದಿಕೇರಿ ಬಿ. ರಾಜೇಂದ್ರ ಹಾಗೂ ಕುಂಜಿಲನ ಡಿ. ರಾಮಯ್ಯ ಸಭೆಯಲ್ಲಿ ಉಪಸ್ಥಿತರಿದ್ದರು.