ಕೂಡಿಗೆ, ಮಾ. ೨೩: ಅವಸಾನದಂಚಿನಲ್ಲಿರುವ ಗುಬ್ಬಚ್ಚಿ ಸೇರಿದಂತೆ ಎಲ್ಲಾ ಪಕ್ಷಿ ಸಂಕುಲಗಳ ರಕ್ಷಣೆಯ ಬಗ್ಗೆ ಪ್ರತಿಯೊಬ್ಬರೂ ಸಂಕಲ್ಪ ತೊಡಬೇಕು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾ ಧ್ಯಾಯ ಟಿ.ಜಿ. ಪ್ರೇಮಕುಮಾರ್ ಮನವಿ ಮಾಡಿದರು.
ಕುಶಾಲನಗರ ತಾಲೂಕಿನ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ವತಿಯಿಂದ ಶಾಲೆಯ ಎಸ್.ಡಿ.ಎಂ.ಸಿ., ಇಕೋ ಕ್ಲಬ್, ವಿಜ್ಞಾನ ಸಂಘ ಹಾಗೂ ಎನ್.ಎಸ್.ಎಸ್. ಘಟಕದ ವತಿಯಿಂದ ವಿಶ್ವ ಗುಬ್ಬಚ್ಚಿ ದಿನದ ಅಂಗವಾಗಿ ಏರ್ಪಡಿಸಿದ್ದ ಪಕ್ಷಿ ಸಂಕುಲ ಸಂರಕ್ಷಣೆ ಕುರಿತ ಜಾಗೃತಿ ಆಂದೋಲನದಲ್ಲಿ ಗುಬ್ಬಚ್ಚಿಗಳ ಸಂರಕ್ಷಣೆ ಕುರಿತು ಅವರು ಮಾತನಾಡಿದರು.
ನಮ್ಮ ಮನೆಯಂಗಳದಲ್ಲಿ ನಮ್ಮ ದಿನನಿತ್ಯದ ಬದುಕಿನೊಂದಿಗೆ ಕುಟುಂಬದ ಸದಸ್ಯರಂತೆ ಜೀವಕಳೆ ನೀಡುತ್ತಿದ್ದ ಗುಬ್ಬಚ್ಚಿಯು ಇಂದು ಕಾಂಕ್ರೀಟ್ ಕಾಡಿನ ಭರಾಟೆಯಲ್ಲಿ ಅಪರೂಪವಾಗುತ್ತಿರುವುದು ಪರಿಸರ ಅಸಮತೋಲನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಪ್ರೇಮಕುಮಾರ್ ಹೇಳಿದರು.
ನಾವು ಗುಬ್ಬಚ್ಚಿಯೊಂದಿಗೆ ಎಲ್ಲಾ ಪಕ್ಷಿ ಸಂಕುಲಗಳ ಸಂರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ ಎಂದರು. ಇಕೋ ಕ್ಲಬ್ನ ಉಸ್ತುವಾರಿ ಶಿಕ್ಷಕಿ ಬಿ.ಡಿ. ರಮ್ಯ, ಪಕ್ಷಿ ಸಂಕುಲ ಸಂರಕ್ಷಣೆ ಮತ್ತು ಜೀವಿ ಪ್ರಪಂಚದ ಕುರಿತು ಮಾಹಿತಿ ನೀಡಿದರು.
ಬೇಸಿಗೆ ವೇಳೆಯಲ್ಲಿ ಶಾಲಾ ಅಂಗಳ ಸೇರಿದಂತೆ ಮನೆಯ ಅಂಗಳದಲ್ಲಿ ಗುಬ್ಬಚ್ಚಿಗಳ ಸಂರಕ್ಷಣೆಗಾಗಿ ಶಾಲಾ ಮಕ್ಕಳು ಗುಬ್ಬಚ್ಚಿಗಳಿಗೆ ಮಡಿಕೆ/ ಪಾತ್ರೆಗಳಲ್ಲಿ ನೀರು ಇಟ್ಟು ಕಾಳು ಇತ್ಯಾದಿ ಆಹಾರ ಧಾನ್ಯಗಳನ್ನು ಒದಗಿಸುವ ಕುರಿತು ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು.
ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಡಿ. ರಮೇಶ್, ಶಿಕ್ಷಕರಾದ ಕೆ. ಗೋಪಾಲಕೃಷ್ಣ, ಎಸ್.ಎಂ. ಗೀತಾ, ಅನ್ಸಿಲಾ ರೇಖಾ, ಪಿ. ಅನಿತಾಕುಮಾರಿ ಇದ್ದರು. ವಿದ್ಯಾರ್ಥಿಗಳ ಗುಬ್ಬಚ್ಚಿ ಸೇರಿದಂತೆ ಪಕ್ಷಿ ಸಂಕುಲ ಹಾಗೂ ನೆಲ- ಜಲ, ಪರಿಸರ, ಜೀವ ವೈವಿಧ್ಯ ಸಂರಕ್ಷಣೆ ಕುರಿತ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.
 
						