ಕೂಡಿಗೆ, ಮಾ. ೨೩: ಕೃಷಿ ಚಟುವಟಿಕೆಯ ಕಾರ್ಯ ಸಂದರ್ಭ ಟ್ರಾö್ಯಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದಾಗ ಟ್ರಾಕ್ಟರ್‌ಗೆ ಸಿಲುಕಿ ಗಾಯಗೊಂಡ ಬೃಹತ್ ನಾಗರ ಹಾವಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಪ್ರಕರಣ ವರದಿಯಾಗಿದೆ.

ಕರ್ಕಳ್ಳಿ ಗ್ರಾಮದ ಪ್ರೌಢಶಾಲೆ ಹಿಂಭಾಗ ವಿಶಾಂತ್ ಎಂಬವರ ಭೂಮಿ ಉಳುಮೆ ಮಾಡುವಾಗ ನೆಲದಲ್ಲಿದ್ದ ನಾಗರಹಾವಿಗೆ ಕಲ್ಟಿವೇಟರ್ ಘಾಸಿ ಉಂಟುಮಾಡಿದೆ. ಇದನ್ನು ಗಮನಿಸಿದ ಟ್ರಾö್ಯಕ್ಟರ್ ಚಾಲಕ ಸ್ಥಳೀಯರ ಗಮನಕ್ಕೆ ತಂದಿದ್ದಾನೆ. ಕೂಡಲೇ ಸ್ಥಳಕ್ಕಾಗಮಿಸಿದ ಕರವೇ ಸೋಮವಾರಪೇಟೆ ಅಧ್ಯಕ್ಷ ದೀಪಕ್, ಉರಗ ತಜ್ಞ ಪ್ರವೀಣ್‌ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಉರಗ ತಜ್ಞ ಹಾವನ್ನು ಹಿಡಿದು ಬೇಳೂರು ಬಾಣೆಯ ಪಶು ವೈದ್ಯಕೀಯ ಚಿಕಿತ್ಸಾಲಯಕ್ಕೆ ತಂದಿದ್ದಾರೆ.

ಪಶುಪಾಲನಾ ಇಲಾಖೆ ಸೋಮವಾರಪೇಟೆ ತಾಲೂಕು ಸಹಾಯಕ ನಿರ್ದೇಶಕ ಡಾ. ಬಾದಮಿ ಅವರ ಸಲಹೆ ಮೇರೆಗೆ ಇಲಾಖೆಯ ಸಹಾಯಕ ಸಿಬ್ಬಂದಿ ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಹುದುಗೂರು ಗ್ರಾಮದ ಬಿ.ಎಲ್. ಸುರೇಶ್ ಹಾವಿಗೆ ಅಗತ್ಯ ಚಿಕಿತ್ಸೆ ನೀಡಿ ಆರೈಕೆ ಮಾಡಿದರು.

ಉರಗ ತಜ್ಞ ಪ್ರವೀಣ್ ಮತ್ತು ಸ್ನೇಹಿತರು ಹಾವಿನ ತಲೆಯನ್ನು ಪ್ಲಾಸ್ಟಿಕ್ ಪೈಪ್‌ನೊಳಗೆ ಸೇರಿಸಿ ಹಿಡಿದು ಸುರಕ್ಷಿತವಾಗಿ ಚಿಕಿತ್ಸೆ ನೀಡಲು ಕ್ರಮವಹಿಸಿದರು.

ಹಾವಿನ ಹೊಟ್ಟೆ ಮಧ್ಯ ಭಾಗಕ್ಕೆ ತೀವ್ರ ಗಾಯವಾಗಿದ್ದು ೪೦ ಹೊಲಿಗೆ ಹಾಕಿ ಔಷಧ ನೀಡಿ ಬ್ಯಾಂಡೇಜ್ ಸುತ್ತಿ ಚಿಕಿತ್ಸೆ

(ಮೊದಲ ಪುಟದಿಂದ) ಯಶಸ್ವಿಯಾಗಿ ನಡೆಸಲಾಯಿತು. ಚಿಕಿತ್ಸೆ ನಂತರ ಹಾವನ್ನು ಪೈಪ್‌ನಿಂದ ಹೊರ ತೆಗೆದು ಆಸ್ಪತ್ರೆ ಆವರಣದಲ್ಲಿ ಬಿಟ್ಟ ಸಂದರ್ಭ ಹಾವು ಅಲ್ಲೇ ತೆವಳಾಡಿದೆ. ಈ ಕಾರಣದಿಂದ ಹಾವಿನ ಗಾಯ ಗುಣಮುಖ ವಾಗುವ ತನಕ ಪ್ರವೀಣ್ ಅವರ ಮನೆಯಲ್ಲೇ ಆರೈಕೆ ಮಾಡಿ ನಂತರ ಯಡವನಾಡು ಮೀಸಲು ಅರಣ್ಯಕ್ಕೆ ಬಿಡಲಾಗುವುದು ಎಂದು ಉರಗ ತಜ್ಞ ಪ್ರವೀಣ್ ತಿಳಿಸಿದರು. ಸದÀ್ಯಕ್ಕೆ ಹಾವು ಆರೋಗ್ಯವಾಗಿದೆ.

ಈ ರಕ್ಷಣಾ ಕಾರ್ಯಾಚರಣೆ ಯಲ್ಲಿ ಶರತ್, ಅಜ್ಜು, ಪವನ್ ಹಾಗೂ ಇದ್ದರು.-ಕೆ.ಕೆ. ನಾಗರಾಜಶೆಟ್ಟಿ