ಮಡಿಕೇರಿ, ಮಾ. ೧೭: ರಕ್ತದಾನ ಶ್ರೇಷ್ಠ ದಾನ ರಕ್ತದಾನದಿಂದ ಮನುಷ್ಯನ ಆರೋಗ್ಯ ವೃದ್ದಿಯಾಗುವುದರೊಂದಿಗೆ ಉತ್ತಮ ಆರೋಗ್ಯ ದೊರೆಯುತ್ತದೆ ಎಂದು ಜಿಲ್ಲಾ ರಕ್ತನಿಧಿ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ. ಗಾಯತ್ರಿ ಅವರು ಅಭಿಪ್ರಾಯಪಟ್ಟರು. ಹೊದ್ದೂರು ಫ್ರೆಂಡ್ಸ್ ಹಾಗೂ ಪುನಿತ್ ರಾಜ್‌ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಪುನಿತ್ ರಾಜ್‌ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಮೂರ್ನಾಡಿನ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಪ್ರಥಮ ವರ್ಷದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಕ್ತದಾನ ಮಾಡುವುದರಿಂದ ದೇಹದಲ್ಲಿ ರಕ್ತ ಹೆಚ್ಚಾಗುತ್ತದೆ. ಆರೋಗ್ಯವಂತರು ರಕ್ತದಾನ ಮಾಡಬೇಕು ಎಂದರು.

ಮಡಿಕೇರಿ ಆಕಾಶವಾಣಿ ಸುದ್ದಿವಾಚಕ ಉಳುವಾರನ ರೋಶನ್ ವಸಂತ್ ಮಾತನಾಡಿ, ರಕ್ತದಾನ ತುಂಬಾ ಶ್ರೇಷ್ಠ ದಾನ. ಯುವ ಜನಾಂಗ ದುಶ್ಚಟಗಳಿಂದ ದೂರವಿದ್ದು ಸಮಾಜ ಸೇವೆಯಲ್ಲಿ ತೊಡಗಬೇಕು. ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ರಕ್ತದಾನ ಮಾಡಲು ಯಾವುದೇ ತರಹದ ಗೊಂದಲ ಬೇಡ; ಯಾವುದೇ ಅಡ್ಡ ಪರಿಣಾಮಗಳಿಲ್ಲ. ರಕ್ತದಾನ ಮನುಷ್ಯರು ಮಾಡುವ ಮಹತ್ವದ ಕಾರ್ಯವಾಗಿದೆ. ಆರೋಗ್ಯವಂತರು ರಕ್ತದಾನ ಶಿಬಿರದಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳ ಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೊದ್ದೂರು ಫ್ರೆಂಡ್ಸ್ ಸಂಘದ ಅಧ್ಯಕ್ಷ ಲೋಹಿತ್ ಮಾತನಾಡಿ ಪುನಿತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ಪ್ರಥಮ ವರ್ಷದ ರಕ್ತದಾನ ಶಿಬಿರ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಇನ್ನಷ್ಟು ಸಮಾಜ ಸೇವಕಾರ್ಯ ಮಾಡಲು ತೀರ್ಮಾನಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ತು ಅಧ್ಯಕ್ಷ ಪುದಿಯೊಕ್ಕಡ ರಮೇಶ್, ಗ್ರಾಮ ಪಂಚಾಯಿತಿ ಸದಸ್ಯ ರಾಜ, ಶಿಬಿರದ ಆಯೋಜಕ ಚೆಟ್ಟಿಮಾಡ ಜೀವನ್ ಮುಂತಾದವರು ಭಾಗವಹಿಸಿದ್ದರು. ಶಿಬಿರದಲ್ಲಿ ಸ್ವಯಂಪ್ರೇರಿತರಾಗಿ ನೂರಾರು ಮಂದಿ ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಿದರು.